ಸತ್ಯ ಜಗತಿದು - Satya jagattidu

ಸತ್ಯ ಜಗತಿದು ಪಂಚಭೇದವು ನಿತ್ಯ ಶ್ರೀ ಗೋವಿಂದನ
ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕವೆಂದು ಸಾರಿರೈ

ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು
ಜೀವ ಜಡಕೆ ಜಡ ಜಡಕೆ ಭೇದ ಜೀವಜಡ ಪರಮಾತ್ಮಗೆ

ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವ ಗಂಧರ್ವರು
ಜಾನಪಿತರಜಾನಜ ಕರ್ಮರು ಉಕ್ತ ಶೇಷ ಶತಸ್ಥರು

ಗಣಪಮಿತ್ರರು ಸಪ್ತಋಷಿಗಳು ವಹ್ನಿ ನಾರದ ವರುಣರು
ಇನಜಗೆ ಸಮ ಚಂದ್ರ ಸೂರ್ಯರು ಮನುಸತಿಯು ಹೆಚ್ಚು ಪ್ರವಹನು

ದಕ್ಷ ಸಮ ಅನಿರುದ್ಧ ಗುರು ಶಚಿ ರತಿಸ್ವಾಯಂಭುವರಾರ್ವರು
ಕಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು

ದೇವೇಂದ್ರನಿಂದಧಿಕ ಮಹರುದ್ರ ರುದ್ರ ಸಮ ಶೇಷಗರುಡರು
ಗರುಡಶೇಷರಿಗಧಿಕರೆನಿಪರು ದೇವಿ ಭಾರತಿ ಸರಸ್ವತಿ

ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು
ವಾಯು ಬ್ರಹ್ಮಗೆ ಕೋಟಿ ಗುಣದಿಂ ಅಧಿಕಶಕ್ತಳು ಶ್ರೀರಮಾ

ಅನಂತ ಗುಣದಿಂ ಲಕುಮಿಗಧಿಕನು ಶ್ರೀ ಪುರಂದರವಿಠಲನು
ಘನ ಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ

ಸಜ್ಜನರ ಸಂಗ - Sajjanara sanga

ಸಜ್ಜನರ ಸಂಗ ನಮಗೆಂದಿಗಾಗುವುದೊ
ದುರ್ಜನರ ಸಂಗದಿಂದಲಿ ನೊಂದೆ ಹರಿಯೆ

ವಾಕು ವಾಕಿಗೆ ಡೊಂಕನೆಣಿಸುವರು ಮತ್ತೆ
ಪೋಕರಾಡಿದ ಮಾತು ನಿಜವೆಂಬರು
ವಾಕುಶೂಲಗಳಿಂದ ನೆಡುವರು ಪರರನೀ
ಪೋಕುಮಾನವರಿಂದ ನೊಂದೆ ಹರಿಯೆ

ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು
ನ್ಯಾಯವಿಲ್ಲದೆ ನುಡಿವರು ಪರರ
ಭಾವಿಸಲರಿಯರು ಗುರುಹಿರಿಯರನಿಂಥ
ಹೇಯ ಮನುಜರಿಂದ ನೊಂದೆ ಹರಿಯೆ

ಬಡಜನರನು ಕೊಂದು ಅಡಗಿಸಿಕೊಂಬರು
ಬಿಡಲೊಲ್ಲರು ಹಿಡಿದನ್ಯಾಯವ
ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥ
ಕಡುಮೂರ್ಖರಿಂದ ನಾ ನೊಂದೆನು ಹರಿಯೆ

ತೊತ್ತಿನೊಡನೆ ತನ್ನ ಸ್ನೇಹಸರಸ ಮಾತು
ತೆತ್ತಿಗರೊಡನೆ ಪಂಥವ ನುಡಿವರು
ಸತ್ತ ಬಳಿಕ ಸೃಷ್ಠಿ ಸಟೆಯೆಂಬರು ಇಂಥ
ಮತ್ತ ಮನುಜರಿಂದ ನೊಂದೆ ಶ್ರೀಹರಿಯೆ

ಇಷ್ಟು ದಿನವು ನಿನ್ನ ನೆನೆಯದ ಕಾರಣ
ಕಷ್ಟಪಡುವ ಕೈಮೇಲಾಗಿ
ಸೃಷ್ಠಿಗೊಡೆಯ ಶ್ರೀಪುರಂದರವಿಠಲನೆ
ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ

ಸಕಲವೆಲ್ಲವು ಹರಿಸೇವೆಯೆನ್ನಿ-Sakalavellu hariseve

ಸಕಲವೆಲ್ಲವು ಹರಿಸೇವೆಯೆನ್ನಿ
ರುಕುಮಿಣಿಯರಸ ವಿಟ್ಠಲನಲ್ಲದಿಲ್ಲವೆನ್ನಿ

ನುಡಿವುದೆಲ್ಲವು ನಾರಾಯಣನ ಕೀರ್ತನೆಯೆನ್ನಿ
ನಡೆವುದೆಲ್ಲವು ದೇವರ ಯಾತ್ರೆಯೆನ್ನಿ
ಕೊಡುವ ದಾನವು ಕಾಮಜನಕಗರ್ಪಿತವೆನ್ನಿ
ಎಡೆಯ ಅನ್ನವು ಹರಿಯ ಪ್ರಸಾದವೆನ್ನಿ

ಹೊಸ ವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿ
ಕುಸುಮ ಪರಿಮಳವು ಶ್ರೀಕೃಷ್ಣಗೆನ್ನಿ
ಎಸೆವ ಆಭರಣ ಯಶೋದೆನಂದನಗೆನ್ನಿ
ಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ

ಆಟಪಾಟಗಳೆಲ್ಲ ಅಂತರ್ಯಾಮಿಗೆ ಎನ್ನಿ
ಊಟ ಸತ್ಕಾರ ಕಂಜನಾಭನಿಗೆನ್ನಿ
ನೀಟಾದ ವಸ್ತುಗಳು ಕೈಟಭಾಂತಕಗೆನ್ನಿ
ಕೋಟಲೆ ಸಂಸಾರ ನಾಟಕಧರಗೆನ್ನಿ

ನಿದ್ರೆ ಜಾಗರವು ಸಮುದ್ರಶಯನಗೆನ್ನಿ
ಭದ್ರನಿಧಿ ಗಜವರದಗೆನ್ನಿ
ರೌದ್ರ ದಾರಿದ್ರ್ಯ ರಾಘವನ ಮಾಯವೆನ್ನಿ
ಶ್ರೀಮುದ್ರೆಗಳ ಧರಿಸಿ ಹರಿದಾಸನೆನ್ನಿ

ಅಣುರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿ
ಎಣಿಸಲಾಗದ ಅನಂತಮಹಿಮನೆನ್ನಿ
ಸೆಣಸುವ ರಕ್ಕಸರ ಶಿರವ ಚೆಂಡಾಡುವ
ಪ್ರಣವ ಗೋಚರ ಪುರಂದರವಿಠಲನೆನ್ನಿ

ಸಕಲ ಗ್ರಹಬಲ ನೀನೆ - Sakala grahabala neene

ಸಕಲ ಗ್ರಹಬಲ ನೀನೆ ಸರಸಿಜಾಕ್ಷ
ನಿಖಿಳ ರಕ್ಷಕ ನೀನೆ ವಿಶ್ವವ್ಯಾಪಕನೆ

ರವಿ ಚಂದ್ರ ಬುಧ ನೀನೆ ರಾಹು ಕೇತುವು ನೀನೆ
ಕವಿ ಗುರು ಶನಿಯು ಮಂಗಳನು ನೀನೆ
ದಿವರಾತ್ರಿಯು ನೀನೆ ನವ ವಿಧಾನವು ನೀನೆ
ಭವರೋಗಹರ ನೀನೆ ಭೇಷಜನು ನೀನೆ

ಪಕ್ಷಮಾಸವು ನೀನೆ ಪರ್ವಕಾಲವು ನೀನೆ
ನಕ್ಷತ್ರ ಯೋಗ ತಿಥಿಕರಣ ನೀನೆ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ

ಋತು ವತ್ಸರವು ನೀನೆ ಪೃಥಿವಿಗಾದಿಯು ನೀನೆ
ಕ್ರತು ಹೋಮ ಯಜ್ಞ ಸದ್ಗತಿಯು ನೀನೆ
ಜಿತವಾಗಿ ಎನ್ನೊಡೆಯ ಪುರಂದರವಿಟ್ಠಲನೆ 
ಶ್ರುತಿಗೆ ಸಿಲುಕದ ಅಪ್ರತಿಮ ಮಹಿಮ ನೀನೆ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ
2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ
3. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ
4. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ
5. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಸಂಸಾರವೆಂಬಂಥ ಭಾಗ್ಯವಿರಲಿ - Samsaravembantha bhagyavirali

ಸಂಸಾರವೆಂಬಂಥ ಭಾಗ್ಯವಿರಲಿ
ಕಂಸಾರಿ ನೆನೆವೆಂಬ ಸೌಭಾಗ್ಯವಿರಲಿ

ತಂದೆ ನೀನೆ ಕೃಷ್ಣ ತಾಯಿ ಇಂದಿರೆದೇವಿ
ಪೊಂದಿದ ಅಣ್ಣನು ವನಜಸಂಭವನು
ಇಂದುಮುಖಿ ಸರಸ್ವತೀದೇವಿಯೇ ಅತ್ತಿಗೆಯು
ಎಂದೆಂದಿಗೂ ವಾಯುದೇವರೇ ಗುರುವು

ಭಾರತೀ ದೇವಿಯೇ ಗುರುಪತ್ನಿಯು ಎನಗೆ
ಗರುಡ ಶೇಷಾದಿಗಳೆ ಗುರುಪುತ್ರರು
ಹರಿದಾಸರೆಂಬುವರೆ ಇಷ್ಟ ಬಾಂಧವರೆನಗೆ
ಹರಿಭಜನೆ ನಡೆಯುತಿಹ ಸ್ಥಳವೆ ಮಂದಿರವು

ಸರುವಾಭಿಮಾನವನು ತ್ಯಜಿಸುವುದೆ ಸುಸ್ನಾನ
ಹರಿಯ ನಾಮವೆ ಇನ್ನು ಅಮೃತಪಾನ
ವರದ ಪುರಂದರವಿಠಲ ನಿನ್ನ ಪಾದ ಧ್ಯಾನ
ಕರುಣಿಸಿ ಅನವರತ ಕರ ಪಿಡಿದು ಕಾಯೊ

ಸಂದಿತಯ್ಯ ಪ್ರಾಯವು - Sanditayya prayavu

ಸಂದಿತಯ್ಯ ಪ್ರಾಯವು ಸಂದಿತಯ್ಯ

ಒಂದು ದಿನವು ಸುಖವು ಇಲ್ಲ ಕುಂದಿಹೋದೆ ಕಷ್ಟದಿಂದ
ಬಂಧನವನು ಬಿಡಿಸುತೆನ್ನ ತಂದೆ ನೀನೆ ರಕ್ಷಿಸಯ್ಯ

ತಂದೆಯುದರದಿ ಮೂರು ತಿಂಗಳು ಸಂದು ಹೋಯಿತು ತಿಳಿಯದೆ
ಬೆಂದೆ ನವಮಾಸದೊಳು ಗರ್ಭದಿ ನಿಂದು ತಾಯಿಯ ಗರ್ಭದೆ
ಕುಂದಿತಾಯುವು ಒಂದು ವರುಷ ಇಂದಿರೇಶನೆ ಕೇಳು ದುಃಖವ
ಬಂಧನದೊಳಗೆ ನಿಂದೆನನುದಿನ ಮುಂದೆ ಮೋಕ್ಷದ ಮಾರ್ಗ ಕಾಣದೆ

ಕತ್ತಲೆಯೊಳಿರಲಾರೆನೆನುತಲಿ ಹೊತ್ತೆ ಹರಕೆಯ ನಿನ್ನೊಳು
ನಿತ್ಯದಲಿ ಮಲಮೂತ್ರ ಬಾಲ್ಯದಿ ಹೊತ್ತುಗಳೆದೆನು ಎನ್ನೊಳು
ಮತ್ತೆ ಹದಿನಾರರ ಪ್ರಾಯದಿ ಉಕ್ಕಿ ನಡೆದೆನು ಧರೆಯೊಳು
ಹತ್ತಿ ಸಂಸಾರದ ಮಾಯೆಯು ಸಿಕ್ಕಿದೆನು ಭವಬಲೆಯೊಳು

ಎಡೆಬಿಡದೆ ಅನುದಿನದಿ ಪಾಪದ ಕಡಲೊಳಗೆ ನಾ ಬಿದ್ದೆನೋ
ದಡವ ಕಾಣದೆ ದುಃಖದೊಳು ಬೆಂದೊಡಲೊಳಗೆ ನಾ ನೊಂದೆನೋ
ಬಿಡದೆ ನಿನ್ನಯ ಧ್ಯಾನವೆಂಬಾ ಹಡಗವೇರಿಸು ಎಂದೆನೋ
ದೃಢದಿ ನಿನ್ನಯ ಪಾದ ಸೇರಿಸೊ ಒಡೆಯ ಪುರಂದರವಿಟ್ಠಲ

ಸಂತತಿಯಪ್ಪುದು ರಾಮಾಯಣವ ಕೇಳಲು - Santatiyappudu raamayanava kelalu

ಸಂತತಿಯಪ್ಪುದು ರಾಮಾಯಣವ ಕೇಳಲು
ಸಕಲ ಪಾಪಹರವು ಭಾರತ ಕೇಳಲು
ತಂತುಮಾತ್ರ ವಿಷ್ಣುಪುರಾಣವ ಕೇಳಲು
ತತ್ತ್ವವಿವೇಕವು ಬಾಹೋದು

ಅಂತವರಿತು ಭಾಗವತವ ಕೇಳಲು
ಆಹೋದೈ ಜ್ಞಾನಭಕ್ತಿ ವೈರಾಗ್ಯವು
ಸಂತತ ಪುರಂದರವಿಠಲನ ಸಂಕೀರ್ತನೆ ಪಾಡಲು
ಸಕಲವು ಬಾಹೋದು ಸಾಯುಜ್ಯವು

ಶ್ರೀನಿವಾಸ ನೀನೆ ಪಾಲಿಸೊ - Shrinivasa neene paaliso

ಶ್ರೀನಿವಾಸ ನೀನೆ ಪಾಲಿಸೊ ಶ್ರಿತಜನಪಾಲ
ಗಾನಲೋಲ ಶ್ರೀ ಮುಕುಂದನೆ

ಧ್ಯಾನಮಾಳ್ಪ ಸಜ್ಜನರ ಮಾನದಿಂದ ಪರಿಪಾಲಿಸುವ
ವೇಣುಗೋಪಾಲ ಗೋವಿಂದ ವೇದವೇದ್ಯ ನಿತ್ಯಾನಂದ

ಎಷ್ಟು ದಿನ ಕಷ್ಟಪಡುವುದೋ ಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಸಿಸಲಾರೆ, ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯೂ ಇಷ್ಟನಾಗಿ ಕೈಯ ಪಿಡಿಯೋ

ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭ್ಯವೊ ಮಾಧವ
ಅಂಧಕಾರಣ್ಯದಲಿ ನಿಂದು ತತ್ತರಿಸುತಿಹೆನೊ
ಅಂದದಿಂ ಭವಾಬ್ದಿಯೊಳು ನಿಂದು ನೊಂದೆನೊ ಗೋವಿಂದ

ಅನುದಿನ ಅನೇಕ ರೋಗಗಳ ಅನುಭವಿಸಿದೆನು
ಘನ ಮಹಿಮನೆ ಕೇಳಯ್ಯ
ತನುವಿನಲಿ ಬಲವಿಲ್ಲ ನೆನೆದ ಮಾತ್ರದಿ ಸಲಹೊ ಯೆನ್ನ
ಹನುಮದೀಶ ಪುರಂದರವಿಟ್ಠಲನೆ ಕೈಯ ಪಿಡಿದು

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

3. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಶ್ರೀನಿವಾಸ ಎನ್ನ ಬಿಟ್ಟು - Shrinivasa enna bittu

ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ
ಮನವೆಂಬೊ ಮಂಟಪ ತನುವೆಂಬೊ ಹಾಸುಮಂಚ
ಜ್ಞಾನವೆಂಬೊ ದಿವ್ಯ ದೀಪದ ಬೆಳಕಿಲಿ ಸನಕಾದಿ ವಂದ್ಯ ನೀ ಬೇಗ ಬಾರೊ

ಪಂಚದೈವರು ಯಾವಾಗಲು ಎನ್ನ ಹೊಂಚುಹಾಕಿ ನೋಡುತಾರೊ
ಕೊಂಚಗಾರರು ಆರು ಮಂದಿ ಅವರು ಹಿಂಚುಮುಂಚಿಲ್ಲದೆ ಎಳೆಯುತಾರೆ

ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ ಇನ್ನಾದರು ಎನ್ನ ಕೈಪಿಡಿಯೊ
ಘನಮಹಿಮ ಶ್ರೀಪುರಂದರವಿಠಲ ಮನ್ನಿಸಿ ಎನ್ನನು ಕಾಯ ಬೇಕೊ



1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಶ್ರೀಕಾಂತ ಎನಗಿಷ್ಟು - Shrikanta enagishtu

ಶ್ರೀಕಾಂತ ಎನಗಿಷ್ಟು ದಯಮಾಡೊ ತಂದೆ
ಏಕಾಂತದಲಿ ನಿನ್ನ ಭಜಿಸುವ ಭಾಗ್ಯ

ಧನದಾಸೆಗಾಗಿ ನಾ ಧನಿಕರ ಮನೆಗಳ
ಕೊನೆ ಬಾಗಿಲಲಿ ನಿಂದು ತೊಳಲಿ ಬಳಲಿದೆನೊ

ದೇಹಾಭಿಮಾನದಿಂದ ವಿಹಿತ ಧರ್ಮವ ತೊರೆದು
ಸ್ನೇಹಾನುಬದ್ಧನಾಗಿ ಸತಿಸುತರ ಪೊರೆದೆನೊ

ಏನಾದರೇನೆನ್ನ ಹೀನ ಗುಣಗಳನೆಲ್ಲ
ಮನ್ನಿಸಿ ಸಲಹೊ ಶ್ರೀ ಪುರಂದರವಿಠಲ

ಶೃಂಗಾರವಾಗಿಹುದು - Shrungaaravagihudu

ಶೃಂಗಾರವಾಗಿಹುದು ಶ್ರೀಹರಿಯ ಮಂಚ
ಅಂಗನೆ ಮಹಲಕುಮಿಯರಸ ಮಲಗುವ ಮಂಚ

ಬಡಗಿ ಮುಟ್ಟದ ಮಂಚ ಕಡಲೊಳಿಹ ಮಂಚ
ಮೃಡನ ತೋಳಲಿ ಅಡಗಿರುವ ಮಂಚ
ಹೆಡೆಯುಳ್ಳ ಹೊಸಮಂಚ ಪೊಡವಿ ಪೊತ್ತಿಹ ಮಂಚ
ಕಡಲಶಯನ ಶ್ರೀರಂಗನ ಸಿರಿಮಂಚ

ಕಾಲಿಲ್ಲದೋಡುವ ಮಂಚ ಗಾಳಿನುಂಗುವ ಮಂಚ
ತೋಳು ಬಿಳುಪಿನ ಮಂಚ ವಿಷಮಂಚ
ಕಾಳಗದೊಳರ್ಜುನನ ಮುಕುಟ ಕೆಡಹಿದ ಮಂಚ
ಕೇಳು ಪರೀಕ್ಷಿತನ ಕೊಂದುದೀ ಮಂಚ

ಕಣ್ಣು ಕಿವಿಯಾದ ಮಂಚ ಬೆನ್ನು ಬಾಗಿದ ಮಂಚ
ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವ ಮಂಚ
ಬಣ್ಣ ಬಿಳುಪಿನ ಮಂಚ ಹೊನ್ನ ಕಾದಿಹ ಮಂಚ
ಕನ್ನೆ ಮಹಾಲಕ್ಷ್ಮಿಯರಸನ ಮಂಚ

ಹಕ್ಕಿಗೆ ಹಗೆಯಾದ ಮಂಚ ರೊಕ್ಕ ಮುಟ್ಟದ ಮಂಚ
ರಕ್ಕಸರೆದೆ ತಲ್ಲಣಗೊಳಿಸುವ ಮಂಚ
ಸೊಕ್ಕು ಪಿಡಿದ ಮಂಚ ಫಕ್ಕನೆ ನುಂಗುವ ಮಂಚ
ಲಕ್ಕುಮಿರಮಣ ಶ್ರೀಹರಿಯ ಮಂಚ

ಅಂಕುಡೊಂಕಿನ ಮಂಚ ಅಕಲಂಕಮಹಿಮ ಮಂಚ
ಸಂಕರುಷಣನೆಂಬ ಸುಖದ ಮಂಚ
ಶಂಕರನ ಕೊರಳಿಗೆ ಪದಕವಾಗಿಹ ಮಂಚ
ವೆಂಕಟಪುರಂದರವಿಠಲರಾಯನ ಮಂಚ

ಶರಣೆಂಬೆ ವಾಣಿ - Sharanembe vani

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ

ವಾಗಭಿಮಾನಿ ವರ ಬ್ರಹ್ಮಾಣಿ
ಸುಂದರವೇಣಿ ಸುಚರಿತ್ರಾಣಿ

ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ

ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರಸೊಸೆಯ


1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಶರಣು ಸಿದ್ಧಿ ವಿನಾಯಕ - Sharanu siddhi Vinayaka

ಶರಣು ಸಿದ್ಧಿ ವಿನಾಯಕ
ಶರಣು ವಿದ್ಯಾ ಪ್ರದಾಯಕ

ಶರಣು ಪಾರ್ವತಿತನಯ ಮೂರುತಿ
ಶರಣು ಮೂಷಕವಾಹನ

ನಿಟಿಲನೇತ್ರನ ದೇವಿ ಸುತನೆ
ನಾಗಭೂಷಣ ಪ್ರೀಯನೆ
ಕಟಿಕಟಾಂಗದ ಕೋಮಲಾಂಗನೆ
ಕರ್ಣಕುಂಡಲಧಾರನೆ

ಬಟುವ ಮುತ್ತಿನಹಾರ ಪದಕನೆ
ಬಾಹು ಹಸ್ತ ಚತುಷ್ಟನೇ
ಇಟ್ಟ ತೊಡುಗೆಯ ಹೇಮಕಂಕಣ
ಪಾಶದಂಕುಶಧಾರನೆ

ಕುಕ್ಷಿ ಮಹಾಲಂಬೋದರನೆ
ಇಕ್ಷುಜಾಪನ ಗೆಲಿದನೆ
ಪಕ್ಷಿವಾಹನನಾದ ಪುರಂದರವಿಠಲನ ನಿಜದಾಸನೆ 

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

3. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

4. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ


ಶರಣು ಶರಣು ನಿನಗೆಂಬೆನೊ - sharanu sharanu ninagembeno

ಶರಣು ಶರಣು ನಿನಗೆಂಬೆನೊ ವಿಠಲ
ಕರುಣಾನಿಧಿಯೆಂಬೆ ಕಾಯಯ್ಯ ವಿಠಲ


ಶಿಶುವಾಗಿ ಜನಿಸಿದ್ಯೊ ಶ್ರೀರಾಮವಿಠಲ
ಶಶಿಧರನುತ ಗೋಪಿಕಂದನೆ ವಿಠಲ
ಅಸುರೆ ಪೂತನಿ ಕೊಂದ ಶ್ರೀಕೃಷ್ಣವಿಠಲ
ಕಸುಮನಾಭ ಸಿರಿವರ ಮುದ್ದುವಿಠಲ


ಅರಸಿ ರುಕ್ಮಿಣಿಗೆ ನೀ ಅರಸನೊ ವಿಠಲ
ಸರಸಿಜ ಸಂಭವ ಸನ್ನುತ ವಿಠಲ
ನಿರುತ ಇಟ್ಟಿಗೆ ಮೇಲೆ ನಿಂತ್ಯೊ ನೀ ವಿಠಲ
ಚರಣ ಸೇವೆಯನಿತ್ತು ಕಾಯಯ್ಯ ವಿಠಲ


ಕಂಡೆ ಗೋಪುರ ವೆಂಕಟ ಪ್ರಭು ವಿಠಲ
ಅಂಡಜವಾಹನ ಹೌದೊ ನೀ ವಿಠಲ
ಪಾಂಡುನಂದನ ಪರಿಪಾಲನೆ ವಿಠಲ
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲ

ವ್ಯರ್ಥವಲ್ಲವೆ ಜನ್ಮ - Vyarthavallave janma

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ
ಆರ್ಥಿಯಿಂದ ಹರಿಯ ನಾಮ
ನಿತ್ಯ ಸ್ಮರಿಸದವನ ಜನ್ಮ

ಹರಿಯ ಸೇವೆ ಮಾಡದವನ
ಹರಿಯ ಗುಣಗಳೆಣಿಸದವನ
ಹರಿಯ ಕೊಂಡಾಡದವನ
ಹರಿಯ ತಿಳಿಯದವನ ಜನ್ಮ

ದಾಸರೊಡನಾಡದವನ
ದಾಸರೊಡನೆ ಪಾಡದವನ
ದಾಸರ ಕೊಂಡಾಡದೆ ಹರಿ
ದಾಸನಾಗದವನ ಜನ್ಮ

ಒಂದು ಶಂಖ ಉದಕ ತಂದು
ಚಂದದಿಂದ ಹರಿಗೆ ಅರ್ಪಿಸಿ
ತಂದೆ ಪುರಂದರವಿಟ್ಠಲನ್ನ
ಹೊಂದಿ ನೆನೆಯದವನ ಜನ್ಮ


1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ವ್ಯಾಸರಾಯರ ಚರಣಕಮಲ - Vyaasaraayara charanakamala


ವ್ಯಾಸರಾಯರ ಚರಣಕಮಲ ದರುಶನವೆನಗೆ
ಯೇಸು ಜನ್ಮದ ಸುಕೃತ ಫಲದಿ ದೊರಕಿತೊ ಎನ್ನ
ಸಾಸಿರ ಕುಲಕೋಟಿಪಾವನ್ನವಾಯಿತು
ಶ್ರೀಶನ ಭಜಿಸುವದಧಿಕಾರಿ ನಾನಾದೆ
ದೋಷ ವಿರಹಿತನಾದ ಪುರಂದರವಿಠಲನ್ನ
ದಾಸರ ಕರುಣವು ಯೆನಮ್ಯಾಲೆ ಇರಲಾಗಿ

ಗುರುವುಪದೇಶವಿಲ್ಲದಾ ಮಂತ್ರ
ಗುರುವುಪದೇಶವಿಲ್ಲದಾ ಭಕ್ತಿ
ಗುರುವುಪದೇಶವಿಲ್ಲದಾ ಕ್ರಿಯೆಗಳು
ಉರಗನ ಉಪವಾಸದಂತೆ ಕಾಣಿರೋ
ಗುರುವ್ಯಾಸರಾಯರ ವರವೆಂದೆನಿಸಿ
ವರಮಹಾಮಂತ್ರವುಪದೇಶವಾಗಿ
ಪುರಂದರವಿಠಲ ಪರನೆಂದೆನಿಸಿ
ದುರಿತ ಭಯಗಳೆಲ್ಲ ಪರಿಹರಿಸಿದನಾಗಿ

ಅಂಕಿತವಿಲ್ಲದ ದೇಹ ನಿಷಿದ್ಧ
ಅಂಕಿತವಿಲ್ಲದ ಕಾಯ ಶೋಭಿಸದು
ಅಂಕಿತವಿಲ್ಲದೆ ಇರಬಾರದೆಂದು ಎನಗೆ ಚ-
ಕ್ರಾಂಕಿತವನು ಮಾಡಿಯೆನಗೆ
ಪಂಕಜನಾಭ ಪುರಂದರವಿಠಲನ್ನ
ಅಂಕಿತವೆನಗಿತ್ತ ಗುರುವ್ಯಾಸ ಮುನಿರಾಯ

ನ್ಯಾಯಾಮೃತ ತರ್ಕತಾಂಡವ ಚಂದ್ರಿಕೆ ಮೊದಲಾದ
ನ್ಯಾಯಗ್ರಂಥಗಳ ರಚಿಸಿ ತನ್ನಯ ಭಕ್ತರಿಗಿತ್ತೆ
ಮಾಯಾವಾದಿ ಮೊದಲಾದ ಇಪ್ಪತ್ತೊಂದು ಕುಭಾಷ್ಯದವರಾ
ಬಾಯ ಮುಚ್ಚಿಸಿದೆ ಮಧ್ವರಾಯರ ಕರುಣದಿಂದ ಸಿ-
ರಿಯರಸ ಪುರಂದರವಿಠಲನ್ನ ಭಕ್ತರೊಳು
ನಾಯಕನೆನಿಸಿಕೊಂಡೆ ರಾಯ ಗುರುವ್ಯಾಸಮುನಿಯೆ

ಶೇಷಾವೇಷ ಪ್ರಹ್ಲಾದನವತಾರನೆನಿಸಿದೆ
ವ್ಯಾಸರಾಯರೆಂಬೊ ಪೆಸರು ನೀನಾಂತೆ
ದೇಶಾಧಿಪಗೆ ಬಂದ ಕುಹುಯೋಗವನು ನೂಕಿ ನೀ ಸಿಂ-
ಹಾಸನವೇರಿ ಮೆರೆದೆ ಜಗವರಿಯೆ
ವ್ಯಾಸಾಬ್ಧಿಯನೆ ಕಟ್ಟಿಸಿ ದೇಶದಾವೊಳಗೆಲ್ಲ
ಭೂಸುರ ಕೀರ್ತಿಯನು ಪಡೆದೆ ಗುರುರಾಯಾ
ವಾಸುದೇವ ಪುರಂದರ ವಿಠಲನ್ನ ದಾಸರೊಳು ಹೆಗ್ಗಳಯೆನಿಸಿಕೊಂಡೆ

ಶ್ರೀನಾರಾಯಣ ಯೋಗಿಯಾದ ಶ್ರೀಪಾದರಾಯರೊಳು
ವಿಹಿತವಾದ ವಿದ್ಯಾಭ್ಯಾಸವ ಮಾಡಿದೆ
ನೀನು ಧರೆಯೊಳು ವಿಜಯೀಂದ್ರವಾದಿರಾಜರೆಂಬೊ
ಪರಮಶಿಷ್ಯರ ಪಡೆದು ಮೆರೆದೆ ಕೀರ್ತಿಯ
ಯೆಲ್ಲ ಸುರೇಂದ್ರ ಪುತ್ರಭಿಕ್ಷವ ಬೇಡಿ ವಿಜಯೀಂದ್ರನ
ಕರುಣಿಸಿದವನನುದ್ಧರಿಸಿದ ಕಾರಣ
ಗುರುವ್ಯಾಸರಾಯರು ಪರಮಗುರುಗಳು
ಪುರಂದರವಿಠಲನೆ ಪರದೈವ ಕಾಣಿರೊ

ಮಾನಸಪೂಜೆಯ ಮಾಡಿ
ದಾನವಾಂತಕ ರಂಗನ್ನ ಮೆಚ್ಚಿ
ತಾನೆ ಬಂದು ಗೋಪಾಲಕೃಷ್ಣನ
ಯೇನೆಂದು ಧ್ಯಾನಿಪೆನೊ
ಯೇನೆಂದು ಪೇಳುವೆ ನಿಮ್ಮ ಮಹಿಮೆಯ
ಜ್ಞಾನಿಗಳರಸ ವ್ಯಾಸಮುನಿರಾಯಾ
ಹೀನ ಜನರು ನಿನ್ನ ಮಾನವನೆಂದು
ನಾನಾ ನರಕಕೆ ಉರುಳುವರು
ಶ್ರೀನಿವಾಸ ಪುರಂದರವಿಠಲನು
ಆನಂದದಿಂದಲಿ ನಿನ್ನ ಮುಂದೆ
ಗಾನವ ಮಾಡುತ್ತ ಆಡುತ್ತಲಿಪ್ಪನು
ಯೇನು ಮಹಿಮೆಯೋದಾವ ಬಲ್ಲನೊ

ಈಸು ಮುನಿಗಳಿದ್ದೇನು ಮಾಡಿದರು ನಮ್ಮ
ವ್ಯಾಸಮುನಿ ಮಧ್ವಮತವನುದ್ಧರಿಸಿ
ಕಾಶಿ ಗದಾಧರಮಿಶ್ರನ ಸೋಲಿಸಿ
ದಾಸನ ಮಾಡಿಕೊಂಡ ಧಾರುಣಿಯೊಳಗೆ
ಕಾಶಿಮಿಶ್ರಪಕ್ಷಧರ ವಾಸುದೇವಾ
ವಾಲಿಲೇಯ ನಾರಸಿಂದ ಯೋಗಿ ಲಿಂಗಣ
ಮಿಶ್ರನೇ ಮೊದಲಾದ ವಿದ್ವಾಂಸರು
ನೂರೆಂಟು ಜಯ ಜಯ ಪತ್ರಿಕೆಯನ್ನು
ವಾಸುದೇವ ಗೋಪಾಲಕೃಷ್ಣನಿಗೆ
ಭೂಷಣವ ಮಾಡಿ ಹಾರಿಸಿದೆ
ಶ್ರೀಶಾ ಪುರಂದರವಿಟ್ಠಲನೆ
ಈಶಯೆಂದಾ ಬ್ರಹ್ಮಾದಿಗಳಿಗೆ
ಈಶನೆಂದು ಡಂಗುರ ಯೊಯ್ಸಿ ಮೆರೆದೆ ಜಗದೊಳಗೆ

ಗುರುವ್ಯಾಸರಾಯರ ಕರುಣ ಕಟಾಕ್ಷದಿ
ಪುರಂದರ ವಿಟ್ಠಲನ್ನ ಚರಣವ ಕಂಡೆ ನಾ


ವೇಣುನಾದ ಬಾರೋ - Venunaada baaro

ವೇಣುನಾದ ಬಾರೋ ಶ್ರೀ ವೆಂಕಟರಮಣನೆ ಬಾರೊ
ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ

ಪೂತನಿಯ ಮೊಲೆಯುಂಡ ನವನೀತ ಚೋರನೆ ಬಾರೋ
ಭೀತ ರಾವಣನ ಸಂಹರಿಸಿದ ಸೀತಾನಾಯಕ ಬಾರೋ

ಬಿಲ್ಲ ಮುರಿದು ಮಲ್ಲರ ಗೆದ್ದ ಪುಲ್ಲನಾಭನೆ ಬಾರೋ
ಗೊಲ್ಲತೇರೊಡನೆ ನಲಿವ ಚೆಲುವ ಮೂರುತಿ ಬಾರೋ

ಮಂದರಗಿರಿ ಎತ್ತಿದಂಥ ಇಂದಿರೆ ರಮಣನೆ ಬಾರೋ
ಕುಂದದೆ ಗೋವುಗಳ ಕಾಯಿದ ಪುಂಡರೀಕಾಕ್ಷನೆ ಬಾರೋ

ನಾರಿಯರ ಮನೆಗೆ ಪೋಗುವ ವಾರಿಜನಾಭನೆ ಬಾರೋ
ಈರೇಳು ಭುವನವ ಕಾಯುವ ಮಾರನಯ್ಯನೆ ಬಾರೋ

ಶೇಷಶಯನ ಮೂರುತಿಯಾದ ವಾಸುದೇವನೆ ಬಾರೋ
ದಾಸರೊಳು ದಾಸನಾದ ಪುರಂದರವಿಠಲ ಬಾರೋ




1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ವೇಂಕಟಾಚಲನಿಲಯಂ - Venkatachala nilayam

ವೇಂಕಟಾಚಲನಿಲಯಂ ವೈಕುಂಠಪುರವಾಸಂ
ಪಂಕಜನೇತ್ರಂ ಪರಮಪವಿತ್ರಂ
ಶಂಖಚಕ್ರಧರ ಚಿನ್ಮಯರೂಪಂ

ಅಂಬುಜೋದ್ಭವ ವಿನುತಂ ಅಗಣಿತಗುಣನಾಮಂ
ತುಂಬುರುನಾರದ ಗಾನವಿಲೋಲಂ
ಅಂಬುಧಿಶಯನಂ ಆತ್ಮಾಭಿರಾಮಂ

ನೌಮಿ ಪಾಂಡವ ಪಕ್ಷಂ ಕೌರವಮದಹರಣಂ
ಬಾಹು ಪರಾಕ್ರಮಪೂರ್ಣಂ
ಅಹಲ್ಯಾಶಾಪ ಭಯನಿವಾರಣಂ

ಸಕಲ ವೇದ ವಿಚಾರಂ ಸರ್ವಜೀವ ನಿಕರಂ
ಮಕರಕುಂಡಲಧರ ಮದನಗೋಪಾಲಂ
ಭಕ್ತ ಪೋಷಕ ಶ್ರೀಪುರಂದರವಿಠಲಂ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

3. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

4. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ



ವೆಂಕಟರಮಣನೆ ಬಾರೊ - Venkataramanane baaro

ವೆಂಕಟರಮಣನೆ ಬಾರೊ ಶೇಷಾಚಲವಾಸನೆ ಬಾರೊ ||
ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೊ||

ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ 
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೊ

ಮಂದರಗಿರಿಯನೆತ್ತಿದಾನಂದ ಮೂರ್ತಿಯೇ ಬಾರೊ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೊ

ಕಾಮನಯ್ಯ ಕರುಣಾಳು ಶ್ಯಾಮಲ ವರ್ಣನೆ ಬಾರೊ
ಕೋಮಳಾಂಗ ಶ್ರೀಪುರಂದರವಿಠಲನೆ ಸ್ವಾಮಿರಾಯನೆ ಬಾರೊ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ವೃಂದಾವನವೇ ಮಂದಿರವಾಗಿಹ - Vrundaavanave mandiravaagiha

ವೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ |ಪ|

ನಂದ ನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ  |ಅ.ಪ|

ತುಳಸಿಯ ವನದಲಿ ಹರಿ ಇಹನೆಂಬುದ ಶೃತಿ ಸಾರುತಿದೆ ಕೇಳಿ
ತುಳಸಿ ದರ್ಶನದಿಂದ ದುರಿತಗಳೆಲ್ಲವು ದೂರವಾಗುವುದು ಕೇಳಿ
ತುಳಸಿ ಸ್ಪರ್ಶವ ಮಾಡೆ, ದೇಹಪಾವನವೆಂದು ತಿಳಿದುದಿಲ್ಲವೇ ಪೇಳಿ
ತುಳಸಿ ಸ್ಮರಣೆ ಮಾಡಿ ಸಕಲ ಇಷ್ಟವ ಪಡೆದು ಸುಖದಲಿ ನೀವು ಬಾಳಿ |೧|

ಮೂಲಮೃತ್ತಿಕೆಯನು ಮುಖದಲಿ ಧರಿಸಲು ಮೂರ್ಲೋಕವಶವಹುದು
ಮಾಲೆ ಕೊರಳಲಿಟ್ಟ ಮನುಜಗೆ ಮುಕುತಿಯ ಮಾರ್ಗವು ತೋರುವುದು
ಕಾಲಕಾಲಗಳಲ್ಲಿ ಮಾಡುವ ದುಷ್ಕರ್ಮ ಕಳೆದು ಬಿಸಾಡುವುದು
ಕಾಲನ ದೂತರ ಕಳಚಿ ಕೈವಲ್ಯದ ಲೀಲೆಯ ತೋರುವುದು ||೨||

ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮೀ ಶ್ರೀ ತುಳಸಿ
ಪರಮಭಕ್ತರ ಘೋರ ಪಾಪಗಳ ತರಿದು ಪಾವನಮಾಡುವ ತುಳಸಿ
ಸಿರಿ ಆಯು ಪುತ್ರಾದಿ ಸಂಪದಗಳನಿತ್ತು ಹರುಷಗೊಳಿಪ ತುಳಸಿ
ಪುರಂದರವಿಠಲನ ಚರಣ ಕಮಲಗಳ ಸ್ಮರಣೆ ಕೊಡುವ ತುಳಸಿ ||೩||


1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ - Lolalotte ella lolalotte

ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ

ಆನೆ ಕುದುರೆ ಒಂಟೆ ಲೊಳಲೊಟ್ಟೆ ಬಹು
ಸೇನೆ ಭಂಡಾರವು ಲೊಳಲೊಟ್ಟೆ
ಮಾನಿನಿಯರ ಸಂಗ ಲೊಳಲೊಟ್ಟೆ ದೊಡ್ಡ
ಕ್ಷೋಣೀಶನೆಂಬುದು ಲೊಳಲೊಟ್ಟೆ

ಮುತ್ತು ಮಾಣಿಕ್ಯ ಲೊಳಲೊಟ್ಟೆ ಚಿನ್ನ
ಛತ್ರ ಚಾಮರ ಧ್ವಜ ಲೊಳಲೊಟ್ಟೆ
ಸುತ್ತಗಲಕೋಟೆ ಲೊಳಲೊಟ್ಟೆ
ಮತ್ತೆ ಉತ್ತಮ ಪ್ರಭುತ್ವ ಲೊಳಲೊಟ್ಟೆ

ಕಂಟಕರೆಂಬೋರು ಲೊಳಲೊಟ್ಟೆ ನಿನ್ನ
ನೆಂಟರು ಇಷ್ಟರು ಲೊಳಲೊಟ್ಟೆ
ಉಂಟಾದ ಗುಣನಿಧಿ ಪುರಂದರವಿಠಲನ
ಬಂಟನಾಗದವ ಲೊಳಲೊಟ್ಟೆ

ಲಂಗೋಟಿ ಬಲು ಒಳ್ಳೆದಣ್ಣ - langoti balu olledanna

ಲಂಗೋಟಿ ಬಲು ಒಳ್ಳೆದಣ್ಣ ಒಬ್ಬರ
ಹಂಗಿಲ್ಲದೆ ಮಡಿಗೆ ಒದುಗುವುದಣ್ಣ

ಬಡವರಿಗಾಧಾರವಣ್ಣ ಈ ಲಂಗೋಟಿ
ಬೈರಾಗಿಗಳ ಭಾಗ್ಯವಣ್ಣ
ಕಡು ಕಳ್ಳರಿಗೆ ಗಂಡ, ಮಡಿ ಧೋತ್ರಗಳ ಮಿಂಡ
ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ

ಜಿತ ಮನ ಸನ್ಯಾಸಿಗಳಿಗಿದೆ ಕೌಪೀನ
ವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವು
ಅತಿಶಯವಿದು ಆಂಜನೇಯ ನಾರದರಿಗೆ
ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ

ದುಡ್ಡು ಮುಟ್ಟದಂತೆ ದೊರಕುವ ವಸ್ತುವು
ದೊಡ್ಡ ಅರಣ್ಯದಿ ಭಯವಿಲ್ಲವು
ಹೆಡ್ಡರೆಂಬುವರೇನೊ ಲಂಗೋಟಿ ಜನರನ್ನು
ದೊಡ್ಡವರೆಂದು ವಂದಿಸುವರು ಯತಿಗಳ

ಮೋಕ್ಷಮಾರ್ಗಕೆ ಕಲ್ಪವೃಕ್ಷವೀ ಲಂಗೋಟಿ
ಭಿಕ್ಷಗಾರರಿಗೆಲ್ಲ ಅನುಕೂಲವು
ತತ್ ಕ್ಷಣದೊಳಗೆ ಕಾರ್ಯಗಳ ತೂಗಿಸಿ ಮಾನ
ರಕ್ಷಣೆಗೆ ಬಹು ರಮ್ಯವಾಗಿರುವಂಥ

ಮಡಿವಾಳರಿಗೆ ಶತ್ರು ಮಠದಯ್ಯಗಳ ಮಿತ್ರ
ಪೊಡವಿಯೊಳ್ ಯಾಚಕರಿಗೆ ನೆರವು
ದೃಢಭಕ್ತ ಬಲಿಚಕ್ರವರ್ತಿಗೋಸ್ಕರ ನಮ್ಮ
ಒಡೆಯ ಶ್ರೀ ಪುರಂದರವಿಠಲ ಧರಿಸಿದಂಥ

ರೊಕ್ಕ ಎರಡಕ್ಕು- Rokka eradakku

ರೊಕ್ಕ ಎರಡಕ್ಕು ದುಃಖ ಕಾಣಕ್ಕ

ಮಕ್ಕಳ ಮರಿಗಳ ಮಾಡೋದು ರೊಕ್ಕ
ಸಕ್ಕರೆ ತುಪ್ಪವ ತಿನಿಸೋದು ರೊಕ್ಕ
ಕಕ್ಕುಲಾತಿಯನು ಬಿಡಿಸೋದು ರೊಕ್ಕ
ಘಕ್ಕನೆ ಹೋದರೆ ಘಾತ ಕಾಣಕ್ಕ

ನೆಂಟರ ಇಷ್ಟರ ಮರೆಸೋದು ರೊಕ್ಕ
ಕಂಟಕಗಳ ಪರಿಹರಿಸೋದು ರೊಕ್ಕ
ಗಂಟು ಕಟ್ಟಲಿಕೆ ಕಲಿಸೋದು ರೊಕ್ಕ
ತುಂಟತನಗಳನು ಬಲಿಸೋದು ರೊಕ್ಕ

ಇಲ್ಲದ ಗುಣಗಳ ತರಿಸೋದು ರೊಕ್ಕ
ಸಲ್ಲದ ನಾಣ್ಯವ ನಡಿಸೋದು ರೊಕ್ಕ
ಬೆಲ್ಲಕ್ಕಿಂತಲು ಬಹು ಸವಿ ರೊಕ್ಕ
ಇಲ್ಲದಿರಲು ಬಹು ದುಃಖ ಕಾಣಕ್ಕ

ಉಂಟಾದ ಗುಣಗಳ ಮರೆಸೋದು ರೊಕ್ಕ
ಬಂಟರನೆಲ್ಲರ ಬರಿಸೋದು ರೊಕ್ಕ
ಕಂಠಿ ಸರಿಗೆಯನು ಗಳಿಸೋದು ರೊಕ್ಕ
ಒಂಟೆ ಕುದುರೆ ಆನೆ ತರಿಸೋದು ರೊಕ್ಕ

ವಿದ್ಯದ ಮನುಜರ ಕರೆಸೋದು ರೊಕ್ಕ
ಹೊದ್ದಿದ ಜನರನು ಬಿಡಿಸೋದು ರೊಕ್ಕ
ಮುದ್ದು ಪುರಂದರವಿಠಲನ ಮರೆಸುವ
ಬಿದ್ದು ಹೋಗೋ ರೊಕ್ಕವ ಸುಡು ನೀನಕ್ಕ

ರಾಮ ಮಂತ್ರವ ಜಪಿಸೊ - Rama mantrava japiso

ರಾಮ ಮಂತ್ರವ ಜಪಿಸೊ ಏ ಮನುಜಾ
ರಾಮ ಮಂತ್ರವ ಜಪಿಸೊ

ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ

ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಭೆ ಭೀದಿ ಭೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ

ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ
ಹೀನಗುಣಂಗಳ ಹಿಂಗಿಸುವ ಮಂತ್ರ
ಏನೆಂಬೆ ವಿಭೀಷಣಗೆ ಪಟ್ಟಗಟ್ಟಿದ ಮಂತ್ರ

ಸಕಲ ವೇದಂಗಳಿಗೆ ಸಾರವೆನಿಪ ಮಂತ್ರ
ಮುಕುತಿ ಮಾರ್ಗಕೆ ಇದೇ ಮೂಲಮಂತ್ರ
ಭಕುತಿರಸಕೆ ಬಟ್ಟೆ ಒಮ್ಮೆ ತೋರುವ ಮಂತ್ರ
ಸುಖನಿಧಿ ಪುರಂದರವಿಠಲನ ಮಾಹಾ ಮಂತ್ರ



1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ರಾಮ ರಾಮ ರಾಮ ರಾಮ ರಾಮನೆನ್ನಿರೋ - Rama Rama Rama Rama Ramanenniro

ರಾಮ ರಾಮ ರಾಮ ರಾಮ ರಾಮನೆನ್ನಿರೋ
ರಾಮ ರಾಮವೆಂಬ ನಾಮ ಮನದಿ ನೆನೆಯಿರೊ

ಇಂದ್ರಿಯಂಗಳೆಲ್ಲ ಕೂಡಿಬಂದು ತನ್ನ ಮುಸುಕಿದಾಗ
ಸಿಂಧುಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು

ಭರದಿ ಯಮನ ಭಟರು ಬಂದು ಹೊರಡು ಎಂದು ಮೆಟ್ಟಲು
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ

ಕಾಸ ಶ್ವಾಸದಲ್ಲಿ ಸಿಲುಕಿ ದೋಷಬಲಿದು ಹೋಗುವಾಗ
ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ

ಸಿಂಗಾರವಾದ ದೇಹ ತಂಗಿ ಬಿಟ್ಟು ಪೋಗುವಾಗ
ಕಂಗಳಿಗಾತ್ಮ ಸೇರಿದಾಗ ರಂಗನ ಧ್ಯಾನ ದೊರಕದಯ್ಯ

ಕಷ್ಟ ಜನ್ಮದಲ್ಲಿ ಬಂದು ದುಷ್ಟ ಕರ್ಮಗಳನು ಮಾಡಿ
ಬಿಟ್ಟು ಹೋಗುವಾಗ ಪುರಂದರವಿಟ್ಠಲನ ನೆನೆ ಮನವೆ


ರಾಗ: ಬಿಲಹರಿ                                                  ತಾಳ: ಛಾಪು

ರಾಮನಾಮವ ನುಡಿ ನುಡಿ

ರಾಮನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ
ಶ್ರೀರಾಮನಾಮವ ನುಡಿ ನುಡಿ

ಗುರುಗಳ ಚರಣವ ಹಿಡಿ ಹಿಡಿ
ಹರಿ ನಿರ್ಮಾಲ್ಯವ ಮುಡಿ ಮುಡಿ
ಕರಕರೆ ಭವಪಾಶವ ಕಡಿ ಕಡಿ ಬಂದ
ದುರಿತವನೆಲ್ಲ ಹೂಡಿ ಹೂಡಿ

ಸಜ್ಜನರ ಸಂಗವ ಮಾಡೋ ಮಾಡೋ
ದುರ್ಜನರ ಸಂಗವ ಬಿಡೋ ಬಿಡೋ
ಅರ್ಜುನಸಾರಥಿ ರೂಪ ನೋಡೋ ನೋಡೋ ಹರಿ
ಭನನೆಯಲಿ ಮನ ಇಡೋ ಇಡೋ

ಕರಿರಾಜವರದನ ಸಾರೋ ಸಾರೋ ಶ್ರಮ
ಪರಹರಿಸೆಂದು ಹೋರೋ ಹೋರೋ
ವರದ ಭೀಮೇಶನ ದೂರದಿರೋ ನಮ್ಮ
ಪುರಂದರವಿಠಲನ ಸೇರೋ ಸೇರೋ


ರಾಗ: ನಾದನಾಮಕ್ರಿಯೆ                      ತಾಳ: ಆದಿ


1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ರಾಮ ಕೃಷ್ಣರು ಮನೆಗೆ ಬಂದರು

ರಾಮ ಕೃಷ್ಣರು ಮನೆಗೆ ಬಂದರು, ಬಾಗಿಲು ತೆರೆಯಿರೆ
ಕಾಮಧೇನು ಬಂದಂತಾಯಿತು ವರವ ಬೇಡಿರೆ

ಚೆಂಡು ಬುಗುರಿ ಚಿಣ್ಣಿಕೋಲು ಗಜ್ಜುಗವಾಡುತ
ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ
ಹಿಂಡುವೆಣ್ಗಳ ಮುದ್ದು ಮುಖದ ಸೊಬಗ ನೋಡುತ
ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ

ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿ
ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ
ಸುಕುಮಾರ ಸುಂದರವಾದ ಉಡಿಗೆ ಉಡುತಲಿ
ಮುಖದ ಕಮಲ ಮುಗುಳುನಗೆಯ ಸುಖವ ಕೊಡುತಲಿ

ಪೊಕ್ಕುಳಲಿ ಅಜನ ಪಡೆದ ದೇವದೇವನು
ಚಿಕ್ಕ ಅಂಗುಷ್ಟದಲ್ಲಿ ಗಂಗೆಯ ಪಡೆದನು
ಮಕ್ಕಳ ಮಾಣಿಕ್ಯನವ ಪುರಂದರವಿಠಲನು
ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು

ರಾಗ: ಜಂಜೂಟಿ                                  ತಾಳ: ಆದಿ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

3. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ರಾಮ ಎಂಬೊ ಎರಡಕ್ಷರದ ಮಹಿಮೆಯನು

ರಾಮ ಎಂಬೊ ಎರಡಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲರಯ್ಯ

ರಾ ಎಂದ ಮಾತ್ರದೊಳು ರಕ್ತಮಾಂಸದೊಳಿದ್ದ
ಆಯಸ್ತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ

ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳಪೊಗದಂತೆ ಕವಾಟವಾಗಿ
ಚಿತ್ತಕಾಯಗಳ ಪವಿತ್ರಮಾಡುವ ಪರಿಯ
ಭಕ್ತವರ ಹನುವಂತನೊಬ್ಬ ತಾ ಬಲ್ಲ

ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲ ಪೊಗಳುತಿಹವು
ಸಿರಿಯರಸ ಪುರಂದರವಿಟ್ಠಲನ ನಾಮವನು
ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ


ರಾಗ: ಕಾಂಬೋದಿ          ತಾಳ: ಝಂಪೆ


1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ರಾಗಿ ತಂದೀರಾ ಭಿಕ್ಷಕೆ

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು

ಅನ್ನದಾನವ ಮಾಡುವರಾಗಿ
ಅನ್ನ ಛತ್ರವನ್ನಿಟ್ಟವರಾಗಿ
ಅನ್ಯ ವಾರ್ತೆಯ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ

ಮಾತಾಪಿತೃಗಳ ಸೇವಿಪರಾಗಿ
ಪಾಪ ಕಾರ್ಯದ ಬಿಟ್ಟವರಾಗಿ
ಜಾತಿಯಲಿ ಮಿಗಿಲಾದವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ

ಗುರು ಕಾರುಣ್ಯವ ಪಡೆದವರಾಗಿ
ಗುರುವಿನ ಮರ್ಮವ ತಿಳಿದವರಾಗಿ
ಗುರುವಿನ ಪಾದವ ಸ್ಮರಿಸುವರಾಗಿ
ಪರಮ ಪುಣ್ಯವ ಮಾಡುವರಾಗಿ

ಶ್ರೀನಿವಾಸನ ಸ್ಮರಿಸುವರಾಗಿ
ಪ್ರಾಣರಾಯನ ದಾಸರಾಗಿ
ದಾನಕೆಂದು ಬಲು ಹೆದರಿ ಇಂಥ
ದೀನವೃತ್ತಿಯಲಿ ಹೀನರಾಗಿ

ಪಕ್ಷಮಾಸ ವ್ರತ ಮಾಡುವರಾಗಿ
ಪಕ್ಷಿವಾಹನಗೆ ಪ್ರಿಯರಾಗಿ
ಕುಕ್ಷಿಲಿ ಕಲ್ಮಷ ಇಲ್ಲದವರಾಗಿ
ಭಿಕ್ಷುಕರು ಅತಿ ತುಚ್ಛರಾಗಿ

ವೇದ ಪುರಾಣದ ತಿಳಿದವರಾಗಿ
ಮೇದಿನಿಯಾಳುವಂಥವರಾಗಿ
ಸಾಧು ಧರ್ಮವಾಚರಿಸುವರಾಗಿ
ಓದಿ ಗ್ರಂಥಗಳ ಪಂಡಿತರಾಗಿ

ಆರು ಮಾರ್ಗವ ಅರಿತವರಾಗಿ
ಮೂರು ಮಾರ್ಗವ ತಿಳಿದವರಾಗಿ
ಭೂರಿ ತತ್ತ್ವವ ಬೆರೆದವರಾಗಿ
ಕ್ರೂರರ ಸಂಗವ ಬಿಟ್ಟವರಾಗಿ

ಕಾಮ ಕ್ರೋಧವ ಅಳಿದವರಾಗಿ
ನೇಮ ನಿಷ್ಠೆಗಳ ಮಾಡುವರಾಗಿ
ಆ ಮಹಾಪದವಿಲಿ ಸುಖಿಸುವರಾಗಿ
ಪ್ರೇಮದಿ ಕುಣಿ ಕುಣಿದಾಡುವರಾಗಿ

ಸಿರಿ ರಮಣನ ಸದಾ ಸ್ಮರಿಸುವರಾಗಿ
ಗುರುತಿಗೆ ಬಾಹೋರಂಥವರಾಗಿ
ಕರೆಕರೆ ಸಂಸಾರ ನೀಗುವರಾಗಿ
ಪುರಂದರವಿಠಲನ ಸೇವಿಪರಾಗಿ

ರಾಗ: ನಾದನಾಮಕ್ರಿಯೆ        ತಾಳ: ಛಾಪು

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ


ರಕ್ಷಿಸು ಲೋಕನಾಯಕನೆ ರಕ್ಷಿಸು

ರಕ್ಷಿಸು ಲೋಕನಾಯಕನೆ ರಕ್ಷಿಸು

ಎಷ್ಟೆಷ್ಟು ಜನ್ಮವ ಕಳೆದೆನೊ 
ಇನ್ನೆಷ್ಟು ಜನ್ಮವ ಕಳೆವೆನೊ
ಕಷ್ಟವ ಪಡಲಾರೆ ಕೃಷ್ಣ ಕೃಪೆಯನಿಟ್ಟು
ಇಷ್ಟವ ಪಾಲಿಸೊ ಇಭರಾಜವರದನೆ

ಬಾಲತನದಿ ಬಹು ನೊಂದೆನೊ ನಾನಾ
ಲೀಲೆಯಿಂದಲಿ ಕಾಲಕಳೆದೆನೊ
ಲೋಲಲೋಚನ ಎನ್ನ ಮೊರೆ ಕೇಳುತ ಬೇಗ
ಜಾಲವ ಮಾಡದೆ ಪಾಲಿಸೊ ನರಹರಿ

ಮುದುಕನಾಗಿ ಚಿಂತೆಪಡುವೆನೊ ನಾ
ಕದಡು ದುಃಖ ಪಡಲಾರೆನೊ
ಉದಧಿಶಯನ ಶ್ರೀ ಪುರಂದರವಿಠಲ
ಮುದದಿಂದ ರಕ್ಷಿಸೊ ಖಗರಾಜ ಗಮನ

ರಾಗ: ಶಂಕರಾಭರಣ             ತಾಳ: ಅಟ್ಟ

ರಂಗನಾಯಕ ರಾಜೀವಲೋಚನ

ರಂಗನಾಯಕ ರಾಜೀವಲೋಚನ
ರಮಣನೆ ಬೆಳಗಾಯಿತೇಳೆನ್ನುತ
ಅಂಗನೆ ಲಕುಮಿ ತಾ ಪತಿಯೆನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನ್ನುತ

ಪಕ್ಷಿರಾಜನು ಬಂದು ಬಾಗಿಲೊಳಗೆ ನಿಂದು
ಅಕ್ಷಿ ತೆರೆದು ಬೇಗ ಈಕ್ಷಿಸೆಂದು
ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತ
ಸುಕ್ಷ್ಮದಲಿ ನಿನ್ನನು ಸ್ಮರಿಸುವವೊ ಕೃಷ್ಣ

ಸನಕ ಸನಂದನ ಸನತ್ಸುಜಾತರು ಬಂದು
ವಿನಯದಿಂ ಕೈಮುಗಿದು ಓಲೈಪರು
ಘನ ಶುಕ ಶೌನಕ ವ್ಯಾಸ ವಾಲ್ಮೀಕರು 
ನೆನೆದು ಕೊಂಡಾಡುವರೊ ಹರಿಯೆ

ಸುರರು ಕಿನ್ನರರು ಕಿಂಪುರುಷರು ಉರಗರು 
ಪರಿಪರಿಯಲಿ ನಿನ್ನ ಸ್ಮರಿಸುವರು
ಅರುಣನು ಬಂದುದಯಾಚಲದಲಿ ನಿಂದ
ಕಿರಣ ತೋರುವ ಭಾಸ್ಕರನು ಶ್ರೀಹರಿಯೆ

ಪದುಮನಾಭನೆ ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಮನೆಯೊಳಗೆ
ಉದಯದೊಳೆದ್ದು ಸವಿದಾಡುತ್ತ ಪಾಡುತ್ತ
ದಧಿಯ ಕಡೆವರೇಳು ಮಧುಸೂದನನೆ ಕೃಷ್ಣ

ಮುರಮಥನನೆ ನಿನ್ನ ಚರಣದ ಸೇವೆಯ
ಕರುಣಿಸಬೇಕೆಂದು ತರುಣಿಯರು
ಪರಿಪರಿಯಿಂದಲಿ ಸ್ಮರಿಸಿ ಹಾರೈಪರು
ಪುರಂದರವಿಠಲ ನೀನೇಳೊ ಹರಿಯೆ

ರಾಗ: ಮೋಹನ            ತಾಳ: ಅಟ್ಟ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ರಂಗ ಬಾರೋ ರಂಗ ಬಾರೋ

ರಂಗ ಬಾರೋ ರಂಗ ಬಾರೋ ರಂಗಯ್ಯ ಬಾರೋ
ಪೊನ್ನುಂಗುರ ನಿನಗೀವೆ ಪನ್ನಗಶಯನನೆ ಬಾರೋ

ವೆಂಕಟರಮಣನೆ ಬಾರೋ ಪಂಕಜ ಚರಣವ ತೋರೋ
ಮುಕುಂದ ಮುಂದೆ ನಿಂದಾಡೋ ಕಿಂಕಿಣಿಕಿಣಿ ರವದಿಂದ

ಕರ್ಣದೊಳಿಟ್ಟ ಮಾಗಾಯಿ ಹೊನ್ನ ಕದಪಿಲಿ ಧುಮುಕಾಡುತ್ತ
ಪನ್ನಗಶಯನನೆ ನಿನ್ನ ಚಿನ್ನದ ಸರ ಹೊಳೆವುತ್ತ ಬಾರೋ

ಬಡನಡುವಿನ ಘಂಟೆ ಬಳುಕಿ ಢಣಢಣಿಸುತ್ತ
ಕಡಗ ಕಾಲಂದುಗೆ ಗೆಜ್ಜೆ ಅಡಿಗಡಿಗೆ ನುಡಿಸುತ್ತ ಬಾರೋ

ಮುಂಗುರುಳಿನ ಸೊಬಗಿನಿಂದ ರಂಗ ನಿನ್ನ ಫಣೆಯೊಳಿಟ್ಟ
ರಂಗು ಮಾಣಿಕ್ಯದರಳೆಲೆ ತೂಗಿ ತೂಗಿ ಓಲಾಡುತ್ತ ಬಾರೋ

ಕೊರಳಿಗಹಾಕಿದ ಹುಲಿಯುಗುರು ತೋರಮುತ್ತಿನ ಹಾರಂಗಳ್ಹೂಳೆಯುತ್ತ
ಪರಿಪರಿ ವಿಧಗಳಿಂದ ಪುರಂದರವಿಠಲ ಬಾರೋ



ರಾಗ: ಮೋಹನ                           ತಾಳ: ಅಟ್ಟ



ಯಾರೆ ರಂಗನ ಯಾರೆ ಕೃಷ್ಣನ

ಯಾರೆ ರಂಗನ ಯಾರೆ ಕೃಷ್ಣನ
ಯಾರೆ ರಂಗನ ಕರೆಯ ಬಂದವರು

ಗೋಪಾಲಕೃಷ್ಣನ ಪಾಪವಿನಾಶನ
ಈ ಪರಿಯಿಂದಲಿ ಕರೆಯ ಬಂದವರು

ವೇಣುವಿನೋದನ ಪ್ರಾಣಪ್ರಿಯನ
ಜಾಣೆಯರರಸನ ಕರೆಯ ಬಂದವರು

ಕರಿರಾಜವರದನ ಪರಮಪುರುಷನ
ಪುರಂದರವಿಠಲನ ಕರೆಯ ಬಂದವರು


ರಾಗ: ಶಂಕರಾಭರಣ       ತಾಳ: ಆದಿ






ಯಾರೆ ಬಂದವರು ಮನೆಗೆ

ಯಾರೆ ಬಂದವರು ಮನೆಗೆ ಮತ್ಯಾರೆ ಬಂದವರು
ನಾರಾಯಣ ಕೃಷ್ಣ ನಾಥನಲ್ಲದೆ ಬೇರೆ

ವಜ್ರರೇಖೆಗಳಿವೆ ಮನೆಯಲ್ಲಿ ಕಾಲ
ಗೆಜ್ಜೆ ಧ್ವನಿ ಕೇಳಿ ಬರುತಿದೆ
ವಜ್ರಮಾಣಿಕ್ಯವೆಲ್ಲ ಹರಿದು ಬಿದ್ದಿವೆ
ಮಜ್ಜಿಗೆಯೊಳಗೆ ಕಾಣ್ವ ಬೆಣ್ಣೆಯ ಕಾಣೆ

ಕೊಂಬು ಕೊಳಲು ರಭಸಗಳಿವೆ
ಕದಂಬ ಕಸ್ತೂರಿ ಪೆಂಪೆಸೆದಿವೆ
ಪೂಂಬಟ್ಟೆ ಚಲ್ಲಣ ಚಲ್ಲಿದೆ ಹಾಲು
ಕುಂಭ ಒಡೆದು ಮನೆತುಂಬ ಬೆಳ್ಳಗಾಯಿತು 

ಮಿಂಚು ಹುಳದಂತೆ ಹೊಳೆವುತ ತಮ್ಮ
ಸಂಚರರೊಡಗೂಡಿ ಚಲಿಸುತ್ತ
ವಂಚಿಸಿ ಬೆಣ್ಣೆಯ ಮೆಲ್ಲುತ ನಮ್ಮ
ಲಂಚದ ಪುರಂದರವಿಠಲನಲ್ಲದೆ ಬೇರೆ

ರಾಗ: ಸೌರಾಷ್ಟ್ರ       ತಾಳ: ಅಟ್ಟ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಯಾರೂ ಸಂಗಡ ಬಾಹೋರಿಲ್ಲ

ಯಾರೂ ಸಂಗಡ ಬಾಹೋರಿಲ್ಲ
ನಾರಾಯಣ ನಿಮ್ಮ ನಾಮ ಒಂದಲ್ಲದೆ

ಹೊತ್ತು ನವಮಾಸ ಪರಿಯಂತರವು ಗರ್ಭದಲಿ
ಹೆತ್ತು ಬಲು ನೋವು ಬೇನೆಗಳಿಂದಲಿ
ತುತ್ತು ಬುತ್ತಿಯ ಕೊಟ್ಟು ಸಲಹಿದಂಥ ತಾಯಿ
ಅತ್ತು ಕಳುಹುವಳಲ್ಲದೆ ನೆರೆ ಬಾಹಳೆ

ದೇವವಿಪ್ರರು ಅಗ್ನಿ ಸಾಕ್ಷಿಯಿಂದಲಿ ತನ್ನ
ಭಾವಶುದ್ಧಿಯಲಿ ಧಾರೆಯೆರೆಸಿಕೊಂಡ
ದೇವಿ ತನ್ನ ತಲೆಗೆ ಕೈಯಿಟ್ಟುಕೊಂಡು 
ಇನ್ನಾವ ಗತಿಯಿಂದೆನುತ ಗೋಳಿಡುವಳಲ್ಲದೆ

ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗ
ಎತ್ತಿವನ ಹೊರಗೊಯ್ದು ಹಾಕೆಂಬರು
ಎತ್ತಿದ ಕಸಕ್ಕಿಂತ ಕಡೆಯಾಯಿತೀ ದೇಹ
ವಿತ್ತವೆಷ್ಟಿದ್ದರೂ ಫಲವಿಲ್ಲ ಹರಿಯೆ

ಪುತ್ರ ಮಿತ್ರರು ಸಕಲ ಬಂಧು ಬಳಗಗಳೆಲ್ಲ
ಹತ್ತಿರ ನಿಂತು ನೋಡುವರಲ್ಲದೆ
ಮೃತ್ಯುದೇವಿಯು ಬಂದು ಅಸುಗಳನು ಸೆಳೆವಾಗ
ಮತ್ತೆ ತನ್ನವರಿದ್ದು ಏನು ಮಾಡುವರು

ಯಮನು ದೂತರು ಬಂದು ಪಾಶಂಗಳನೆ ಎಸೆದು
ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು
ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ
ಕಮಲಾಕ್ಷ ಪುರಂದರವಿಠಲ ನೀನಲ್ಲದೆ

ರಾಗ: ಮೋಹನ        ತಾಳ: ಅಟ್ಟ


ಯಾರು ಬಿಟ್ಟರೂ ಕೈಯ ನೀ ಬಿಡದಿರು

ಯಾರು ಬಿಟ್ಟರೂ ಕೈಯ ನೀ ಬಿಡದಿರು ಕಂಡ್ಯ ನಾರಾಯಣ ಸ್ವಾಮಿ
ನೀ ಬಿಟ್ಟರೆ ಮುಂದಿನ್ನಾರು ಕಾಯ್ವರ ಕಾಣೆ ನಾರಾಯಣ

ಮುಂದೆ ನೋಡಿದರೆ ಹೆಬ್ಬುಲಿ ಬಾಯ್ಬಿಡುತಿದೆ ನಾರಾಯಣ ಸ್ವಾಮಿ
ಹಿಂದೆ ನೋಡಿದರೆ ಹೆಬ್ಬಾವು ನುಂಗುತಲಿದೆ ನಾರಾಯಣ
ಕಂಡು ಮಡುವ ಬೀಳಲು ಅಲ್ಲಿ ನೆಗಳಿಗೆ ನಾರಾಯಣ ಬಹು
ಬಂಧನದೊಳು ಸಿಕ್ಕಿ ಬಳಲಿ ನೊಂದೆನಯ್ಯ ನಾರಾಯಣ

ನಂಬಿ ನಾ ಪಿಡಿದರೆ ಕೊಂಬೆಲ್ಲ ಮುರಿದಾವು ನಾರಾಯಣ ಸ್ವಾಮಿ
ಹಂಬಲಿಸಿದರಂಜಬೇಡವೆಂಬುವರಿಲ್ಲ ನಾರಾಯಣ
ತುಂಬಿದ ಹೊಳೆಯಲ್ಲಿ ಹರಿಗೋಲನೇರಿದೆ ನಾರಾಯಣ ಸ್ವಾಮಿ
ಅಂಬಿಗನಂತೆನ್ನ ದಡವ ಸೇರಿಸೊ ಮುನ್ನ ನಾರಾಯಣ

ಶಿಶು ಅವತಾರದಿ ಪಶುಗಳ ನೀ ಕಾಯ್ದೆ ನಾರಾಯಣ ಸ್ವಾಮಿ
ದಶ ಅವತಾರದಿ ಚಕ್ರವ ತಾಳಿದೆ ನಾರಾಯಣ
ವಿಷದ ಕಾಳಿಂಗನ ಮಡುವ ಕಲಕಿ ಬಂದೆ ನಾರಾಯಣ ಸ್ವಾಮಿ
ವಸುಧೆಯೊಳಧಿಕ ಪುರಂದರವಿಠಲನೆ ನಾರಾಯಣ

ರಾಗ: ನಾದನಾಮಕ್ರಿಯೆ                                    ತಾಳ: ಆದಿ

ಯಾರು ಒಲಿದರೇನು

ಯಾರು ಒಲಿದರೇನು ನಮಗಿ-
ನ್ನಾರು ಮುನಿದರೇನು

ಕ್ಷೀರಸಾಗರಶಾಯಿಯಾದವನ
ಸೇರಿದಂಥ ಹರಿದಾಸರಿಗೆ

ಊರನಾಳುವ ದೊರೆಗಳು ನಮ್ಮನು ದೂರ ಅಟ್ಟಿದರೇನು
ಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನು
ಮಾರಿಹಿಂಡು ಮತ್ತೆ ಮುಸುಕಿನ ದಂಡು ಮೈಗೆ ಮುತ್ತಿದರೇನು
ವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ

ಪಡೆದ ತಾಯಿ ತಂದೆ ನಮ್ಮೊಳು ಅಹಿತ ಮಾಡಿದರೇನು
ಮಡದಿ ಮಕ್ಕಳು ಮನೆಯ ನೆಂಟರು ಮುನಿಸುಗುಟ್ಟಿದರೇನು
ಒಡನಾಡುವ ಗೆಳೆಯರು ನಮ್ಮೊಳು ವೈರವ ಬೆಳೆಸಿದರೇನು
ಕಡಲಶಯನ ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ

ಕಾನನದೊಳ್ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕೀಟ ಕ್ರಿಮಿಗಳು ಚರ್ಮಕೆ ಮುತ್ತಿದರೇನು
ಭಾನುನಂದನ ಬುಧ ಮಂಗಳರಾ ಬಲವು ತಪ್ಪಿದರೇನು
ದೀನನಾಥ ಶ್ರೀ ಪುರಂದರವಿಠಲನ ಧ್ಯಾನವುಳ್ಳ ಹರಿದಾಸರಿಗೆ

ರಾಗ: ಆನಂದಭೈರವಿ                                                       ತಾಳ: ಆದಿ

ಯಾದವ ನೀ ಬಾ ಯದುಕುಲ ನಂದನ

ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೊ

ಸೋದರಮಾವನ ಮಧುರೆಲಿ ಮಡುಹಿದ ಯ-
ಶೋದೆ ನಂದನ ನೀ ಬಾರೊ

ಕಣಕಾಲಂದುಗೆ ಘಲುಘಲುರೆನುತಲಿ
ಝಣಝಣ ವೇಣುನಾದದಲಿ
ಚಿಣಿಕೋಲ್ ಚೆಂಡು ಬುಗುರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ

ಶಂಖ ಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೊ
ಅಕಳಂಕ ಚರಿತನೆ ಆದಿನಾರಾಯಣ
ಬೇಕೆಂಬ ಭಕ್ತರಿಗೊಲಿ ಬಾರೊ

ಖಗವಾಹನನೆ ಬಗೆಬಗೆಯಿಂದಲಿ
ನಗೆಮೊಗದರಸನೆ ನೀ ಬಾರೊ
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಟ್ಠಲ ನೀ ಬಾರೊ


ರಾಗ: ಜುಲಾಪ್             ತಾಳ: ಅಟ್ಟ

ಯಾಕೆನ್ನೋಳಿನಿತು ಕೃಪೆಯಿಲ್ಲ ಹರಿಯೆ

ಯಾಕೆನ್ನೋಳಿನಿತು ಕೃಪೆಯಿಲ್ಲ ಹರಿಯೆ ಕಾಕುಮಾಡದೆ ಕಾಯೊ ಭವದೊಳಗೆ ಬಳಲಿದೆನು

ಕಂದರ್ಪ ಬಾಧೆಯಿಂ ಮಾನಿನಿಯ ವಶನಾಗಿ
ಮಂದಮತಿಯಿಂದ ಬಲು ಮರುಳಾದೆನೊ
ಸಂದಿತೈ ಯೌವನವು ಬುದ್ಧಿ ಬಂದಿತು ಈಗ
ಸಂದೇಹಪಡದೆ ನೀ ಕರುಣಿಸೈ ಎನ್ನ

ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗ
ಹಿಂಡು ಮಕ್ಕಳು ಎನ್ನ ಕಾಡುತಿಹರು
ಮುಂಡಮೋಚಿದೆ ನಾನು ಇನ್ನಾರು ಗತಿ ಎನಗೆ
ಪುಂಡರೀಕಾಕ್ಷ ನೀ ಕರುಣಿಸೈ ಎನ್ನ

ಅಟ್ಟ ಮೇಲೆ ಒಲೆಯು ಉರಿವಂತೆ ಎನಗೀಗ
ಕೆಟ್ಟ ಮೇಲೆ ಅರಿವು ಬಂದಿತಯ್ಯ
ನೆಟ್ಟನೆ ಪುರಂದರವಿಠಲನೆ ಕೈ ಬಿಡದೆ
ದೃಷ್ಟಿಯಿಂದಲಿ ನೋಡಿ ಪರಿಪಾಲಿಸಯ್ಯ


ರಾಗ: ಮುಖಾರಿ                           ತಾಳ: ಅಟ್ಟ

ಯಾಕೆ ಮೂರ್ಖನಾದ್ಯೋ ಮನುಜ


ಯಾಕೆ ಮೂರ್ಖನಾದ್ಯೋ ಮನುಜ
ಯಾಕೆ ಮೂರ್ಖನಾದ್ಯೋ

ಯಾಕೆ ಮೂರ್ಖನಾದ್ಯೋ ನೀನು
ಕಾಕುಬುದ್ಧಿಯನ್ನು ಬಿಟ್ಟು
ಲೋಕನಾಥನನ್ನು ನೆನೆ ಕಂಡ್ಯ ಮನುಜ

ಸಾಧು ಸಜ್ಜನ ಸಂಗ ಮಾಡು
ಭೇದಾಭೇದ ತಿಳಿದು ನೋಡು
ವಾದ ಬುದ್ಧಿ ಮಾಡುವರೇನೋ ಮನುಜ

ದಾನ ಧರ್ಮವನ್ನು ಮಾಡು
ಜ್ಞಾನದಿಂದ ತಿಳಿದು ನೋಡು
ಹೀನಬುದ್ಧಿ ಮಾಡುವರೇನೋ ಮನುಜ

ಮಕ್ಕಳು ಹೆಂಡಿರು ತನ್ನವರೆಂದು
ರೊಕ್ಕವನ್ನು ಗಳಿಸಿಕೊಂಡು
ಸೊಕ್ಕಿನಿಂದ ತಿರುಗುವರೇನೋ ಮನುಜ

ಅಂತಕನ ದೂತರು ಬಂದು
ಕಂತೆ ಕಟ್ಟು ಹೊರಡು ಎಂದು
ನಿಂತರೆಲ್ಲರು ಬಿಡಿಸುವರೇನೋ ಮನುಜ

ಅರಿಷಡ್ವರ್ಗದ ಆಟವ ಬಿಟ್ಟು
ಪುರಂದರವಿಠಲನ ಧ್ಯಾನದೊಳಿಟ್ಟು
ಪರಗತಿ ದಾರಿಯ ನೋಡೋ ಮನುಜ

ರಾಗ: ನಾದನಾಮಕ್ರಿಯೆ                         ತಾಳ: ಆದಿ