ಮಂದಗಮನೆ ಇವನಾರೆ ಪೇಳಮ್ಮ

ಮಂದಗಮನೆ ಇವನಾರೆ ಪೇಳಮ್ಮ
ಮಂದರಧರೆ ಗೋವಿಂದ ಕಾಣಮ್ಮ

ಕೆಂದಳಿರು ನಖ ಶಶಿಬಿಂಬ ಪದಪದ್ಮ
ಅಂದುಗೆ ಇಟ್ಟವನಾರೆ ಪೇಳಮ್ಮ
ಅಂದು ಕಾಳಿಂಗನ ಹೆಡೆಯ ತುಳಿದ ದಿಟ್ಟ
ನಂದನ ಕಂದ ಮುಕುಂದ ಕಾಣಮ್ಮ

ಉಡುಗೆ ಪೀತಾಂಬರ ನಡುಗೆ ಹೊನ್ನುಡುದಾರ
ಕಡಗ ಕಂಕಣವಿಟ್ಟವನಾರಮ್ಮ
ಮಡದಿ ಕೇಳ್ ಸಕಲ ಲೋಕಂಗಳ ಕುಕ್ಷಿಯೊ-
ಳೊಡನೆ ತೋರಿದ ಜಗದೊಡೆಯ ಕಾಣಮ್ಮ

ನೀರದ ನೀಲದಂತೆಸೆವ ವಕ್ಷದಿ ಕೇ-
ಯೂರ ಹಾರನಿಟ್ಟವನಾರಮ್ಮ
ನೀರೆ ಕೇಳು ನಿರ್ಜರರಾದವರಿಗೆ
ಪ್ರೇರಿಸಿ ಫಲವಿತ್ತುದಾರಿ ಕಾಣಮ್ಮ

ಶಂಖ ಚಕ್ರವು ಗದೆ ಪದ್ಮ ಕೈಯೊಳಗಿಟ್ಟ
ಲಂಕರಿಸುವನೀತನಾರಮ್ಮ
ಪಂಕಜಮುಖಿ ಶ್ರೀ ಭೂದೇವಿಯರಸನು
ಶಂಕೆಯಿಲ್ಲದೆ ಗೋಪಿತನಯ ಕಾಣಮ್ಮ

ಕಂಬುಕಂಧರ ಕರ್ಣಾಲಂಬಿತಕುಂಡಲ
ಅಂಬುಜ ಮುಖದವನಾರೆ ಪೇಳಮ್ಮ
ರಂಭೆ ಕೇಳೀತ ಪುರಂದರವಿಟ್ಠಲ
ನಂಬಿದ ಭಕ್ತಕುಟುಂಬಿ ಕಾಣಮ್ಮ

                                                                                              ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಮಂಗಳ ಶ್ರೀತುಳಸಿದೇವಿಗೆ

ಮಂಗಳ ಶ್ರೀತುಳಸಿದೇವಿಗೆ
ಜಯ ಮಂಗಳ ವೃಂದಾವನದೇವಿಗೆ

ನೋಡಿದ ಮಾತ್ರಕೆ ದೋಷ ಸಂಹಾರಿಗೆ
ಬೇಡಿದ ವರಗಳ ಕೊಡುವವಳಿಗೆ
ಮಾಡೆ ವಂದನೆಯನು ಮನುಜರ ಪಾಪದ
ಗೂಡ ನೀಡಾಡುವ ಗುಣವಂತೆಗೆ

ಮುಟ್ಟಿದ ಮಾತ್ರಕೆ ಮುಕ್ತರ ಮಾಡುವ
ಮುದದಿಂದುದ್ಧರಿಸುವ ಮುನಿವಂದೈಗೆ
ಕೊಟ್ಟರೆ ನೀರನು ಬೇರಿಗೆ ಕಾಲನ
ಮುಟ್ಟಿಲೀಸದ ಹಾಗೆ ಮಾಳ್ಪಳಿಗೆ

ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆ
ಚಿತ್ತವಲ್ಲಭ ಕೃಷ್ಣನ್ಹರುಷದಲಿ
ಅತ್ಯಂತವಾಗಿ ತಾ ತೋರಿ ಭವದ ಬೇರ
ಕಿತ್ತು ಬಿಸಾಡುವ ಕೋಮಲೆಗೆ

ಕೋಮಲವಾಗಿದ್ದ ದಳಮಂಜರಿಗಳ
ಪ್ರೇಮದಿಂದಲಿ ತಂದು ಶ್ರೀಹರಿಗೆ
ನೇಮದಿಂದರ್ಚಿಸೆ ಪರಮಾತ್ಮನೊಳು ಜೀವ
ಕಾಮಿತಾರ್ಥವನೀವ ಸದ್ಗುಣಿಗೆ

ಕಾಷ್ಠವ ತಂದು ಗಂಧವ ಮಾಡಿ ಕೃಷ್ಣಗೆ
ನಿಷ್ಠಯಿಂದಲಿ ಲೇಪನ ಮಾಳ್ಪರ
ಜ್ಯೇಷ್ಠರೆನಿಸಿ ವೈಕುಂಠದಿ ನಿಲಿಸಿ ಸಂ
ತುಷ್ಟರ ಮಾಡುವ ಸೌಭಾಗ್ಯಗೆ

ಅನ್ನವನುಂಡರು ನೀಚರ ಮನೆಯಲ್ಲಿ
ಉನ್ನತ ಪಾಪವ ಮಾಡಿದ್ದರೂ
ತನ್ನ ದಳವನೊಂದ ಕರ್ಣದಲ್ಲಿಟ್ಟರೆ
ಧನ್ಯರ ಮಾಡುವ ದಯವಂತೆಗೆ

ಸರಸಿಜನಾಭನ ಸಲಿಗೆಯ ರಾಣಿಗೆ
ಶರಣಜನರ ಪೊರೆವ ಸದ್ಗುಣಿಗೆ
ತಿರುಪತಿ ನಿಲಯ ಶ್ರೀಪುರಂದರವಿಠಲನ
ಚರಣಸೇವಕಳಾದ ಚಿನ್ಮಯೆಗೆ

ಮಂಗಳ ಮಾರಮಣನಿಗೆ

ಮಂಗಳ ಮಾರಮಣನಿಗೆ ಶುಭಮಂಗಳ ಭೂರಮಣನಿಗೆ
ಜಯ ಮಂಗಳಂ ನಿತ್ಯ ಶುಭಮಂಗಳಂ

ಮುಕುಟಕ್ಕೆ ಮಂಗಳ ಮತ್ಸ್ಯಾವತಾರಗೆ
ಮುಖಕೆ ಮಂಗಳ ಮುದ್ದು ಕೂರ್ಮನಿಗೆ
ಸುಕಂಠಕ್ಕೆ ಮಂಗಳ ಸೂಕರ ರೂಪಗೆ
ನಖಕೆ ಮಂಗಳ ಮುದ್ದು ನರಸಿಂಹಗೆ

ವಕ್ಷಕೆ ಮಂಗಳ ವಟುವಾಮನಗೆ
ಪಕ್ಷಕೆ ಮಂಗಳ ಭಾರ್ಗವಗೆ
ಕಕ್ಷೆಗೆ ಮಂಗಳ ಕಾಕುತ್ಸ್ಥ ರಾಮನಿಗೆ
ಕುಕ್ಷಿಗೆ ಮಂಗಳ ಸಿರಿಕೃಷ್ಣಗೆ

ಊರುಗಳಿಗೆ ಮಂಗಳ ಉತ್ತಮ ಬೌದ್ಧಗೆ
ಚರಣಕ್ಕೆ ಮಂಗಳ ಚಲುವ ಶ್ರೀಕಲ್ಕಿಗೆ
ಪರಿಪರಿರೂಪಗೆ ಪರಮ ಮಂಗಳ ನಮ್ಮ
ಪುರಂದರವಿಠಲಗೆ ಶುಭಮಂಗಳ

ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ

ನಿಗಮವ ತಂದಾ ಮತ್ಸ್ಯಾವತಾರಗೆ
ನಗವ ಬೆನ್ನಲಿ ಪೊತ್ತ ಕೂರ್ಮನಿಗೆ
ಜಗವನುದ್ಧರಿಸಿದ ವರಾಹಾವತಾರಗೆ
ಮಗುವಿನ ಕಾಯ್ದ ಮುದ್ದು ನರಸಿಂಹಗೆ

ಭೂಮಿಯ ದಾನವ ಬೇಡಿದಗೆ
ಮಹಾ ಅರಸರ ಗೆಲಿದವಗೆ
ರಾಮಚಂದ್ರನೆಂಬ ಸ್ವಾಮಿಗೆ ಸತ್ಯ-
ಭಾಮೆಯ ಅರಸ ಗೋಪಾಲಕೃಷ್ಣಗೆ

ಬತ್ತಲೆ ನಿಂತಿಹ ಬುದ್ಧನಿಗೆ
ಉತ್ತಮ ಹಯವನೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹಿದ

ನಿತ್ಯ ಶ್ರೀ ಪುರಂದರವಿಠಲನಿಗೆ

ಭ್ರಷ್ಟರಾದರು ಮನುಜರು

ಭ್ರಷ್ಟರಾದರು ಮನುಜರು

ಅಷ್ಟ ಮದ ಗರ್ವದಲಿ ಹರಿಸ್ಮರಣೆಯನು ಮರೆತು

ಮಡದಿ ಮಾತನು ಕೇಳಿ ನಡೆದುಕೊಂಬನು ಭ್ರಷ್ಟ
ಪಡೆದ ಜನನಿಯನು ಬೈಯುವನು ಭ್ರಷ್ಟ
ಕಡವ ಕೊಟ್ಟವರೊಡನೆ ಧಡಿತನ ಮಾಡುವ ಭ್ರಷ್ಟ
ಬಡವರಿಗೆ ಕೊಟ್ಟ ನುಡಿ ನಡೆಸದವ ಭ್ರಷ್ಟ

ಬಾರದೊಡವೆಗಳನ್ನು ಬಯಸುವನು ತಾ ಭ್ರಷ್ಟ
ಸೇರದವರೊಡನೆ ಸ್ನೇಹಿಸುವ ಭ್ರಷ್ಟ
ಶೌರಿದಿನ ವ್ರತವನಾಚರಿಸದವನತಿ ಭ್ರಷ್ಟ
ನಾರಿಯರ ನೆಚ್ಚಿದಾ ನರನು ಕಡು ಭ್ರಷ್ಟ

ತಂತ್ರವನು ಅರಿಯದೆ ಮಂತ್ರ ಮಾಡುವ ಭ್ರಷ್ಟ
ಮಂತ್ರವಿಲ್ಲದ ವಿಪ್ರನತಿ ಭ್ರಷ್ಟನು
ಅಂತರವನರಿಯದೆ ನುಡಿದವನು ಭ್ರಷ್ಟ ಸ್ವ-
ತಂತ್ರವಿಲ್ಲದೆ ಕಾರ್ಯ ನಡೆಸುವನು ಭ್ರಷ್ಟ

ಹರಿಚರಿತ್ರೆಗಳನ್ನು ಜರಿದಾಡುವವ ಭ್ರಷ್ಟ
ಹರಿಯ ಶರಣರ ನೋಡಿ ನಿಂದಿಸುವ ಭ್ರಷ್ಟ
ಗುರುಹಿರಿಯರ ಪಾದಕ್ಕೆರಗದವ ಭ್ರಷ್ಟ
ನೆರೆಹೊರೆಯರನು ನೋಡಿ ಕುರುಬುವನು ಭ್ರಷ್ಟ

ಹರಿನಾಮವನು ದಿನದಿ ಸ್ಮರಿಸದಾತನು ಭ್ರಷ್ಟ
ಕರುಣವಿಲ್ಲದ ವಿಪ್ರನವ ಭ್ರಷ್ಟನು
ಕರುಣಾಳು ನಮ್ಮ ಸಿರಿ ಪುರಂದರವಿಠಲನ
ಚರಣಕಮಲವ ಸ್ಮರಿಸದವ ಭ್ರಷ್ಟನಯ್ಯ

ಭಾಷೆ ಹೀನರ ಸಂಗವಭಿಮಾನ ಭಂಗ

ಭಾಷೆ ಹೀನರ ಸಂಗವಭಿಮಾನ ಭಂಗ
ಬೇಸತ್ತು ಬೇಲಿಯ ಮೇಲೊರಗಿದಂತೆ

ಹಸಿವೆಗಾರದೆ ಬೆಕ್ಕು ಹತ್ತಿಯನು ಮೆದ್ದಂತೆ
ತೃಷೆಗಾರದೆ ಜೋಗಿ ತೆವರ ತೋಡಿದಂತೆ
ಬಿಸಿಲಿಗಾರದೆ ಕೋತಿ ಬಂಡೆಮೇಲ್ಕುಳಿತಂತೆ
ಕುಸುಬೆಯ ಹೊಲದಲ್ಲಿ ಕಳ್ಳ ಹೊಕ್ಕಂತೆ

ಮಳೆಯ ರಭಸಕೆ ಅಂಜಿ ಮರವೇರಿ ಕುಳಿತಂತೆ
ಛಳಿಯ ತಾಳದೆ ಜಲದಿ ಮುಳುಗಿದಂತೆ
ಹುಳುವಿನಂಜಿಕೆಗೆ ಹೋಗಿ ಹುತ್ತದಲಿ ಕುಳಿತಂತೆ
ಎಳೆನರಿಯು ಒಂಟೆಯ ತುಟಿಗೆ ಜೋತಂತೆ

ಭಾಷೆ ಹೀನರ ಆಸೆ ಪುರುಷ ನಾರಿಯ ವೇಷ
ಬಿಸಿಲು ಹಣ್ಣನು ಮೆದ್ದು ಬಳಲುತಿಹರು
ವಸುಧೆಯೊಳು ಪುರಂದರವಿಠಲನ ನೆರೆ ನಂಬಿ
ಕುಶಲದಲಿ ಸುಖಿಯಾಗಿ ಬಾಳೆಲವೊ ಮನುಜ

ಭಾರತಿದೇವಿಯ ನೆನೆ ನೆನೆ

ಭಾರತಿದೇವಿಯ ನೆನೆ ನೆನೆ
ನಿರುತ ಭಕುತಿಗಿದು ಮನೆ ಮನೆ

ಮಾರುತನರ್ಧಾಂಗಿ ಸುಚರಿತ ಕೋಮಲಾಂಗಿ
ಸಾರಸಾಕ್ಷಿ ಕೃಪಾಂಗಿ ಅಪಾಂಗಿ

ಕಿಂಕಿಣಿ ಕಿಣಿಪಾದ ಪಂಕಜನೂಪುರ
ಕಂಕಣ ಕುಂಡಲಾಲಂಕೃತ ದೇಹ

ಶಂಕರ ಸುರವರ ವಂದಿತ ಚರಣೆ
ಕಿಂಕರಿ ಪುರಂದರವಿಟ್ಠಲ ಕರುಣೆ


ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಭಯನಿವಾರಣವು ಶ್ರೀಹರಿಯ ನಾಮ

ಭಯನಿವಾರಣವು ಶ್ರೀಹರಿಯ ನಾಮ
ಜಯಪಾಂಡುರಂಗವಿಟ್ಠಲ ನಿನ್ನ ನಾಮ

ಧಾರಿಣೀದೇವಿಗಾಧಾರವಾಗಿಹ ನಾಮ
ನಾರದರು ನಲಿನಲಿದು ನೆನೆವ ನಾಮ
ಘೋರಪಾತಕಿ ಅಜಾಮಿಳನ ಸಲಹಿದ ನಾಮ
ತಾರಕವು ಬ್ರಹ್ಮ-ಭವರಿಗೆ ನಿನ್ನ ನಾಮ

ಮೊರೆಯ ಲಾಲಿಸಿ ಮುನ್ನ ಗಜವ ಸಲಹಿದ ನಾಮ
ಕರುಣದಿಂ ದ್ರೌಪದಿಯ ಕಾಯ್ದ ನಾಮ
ಮರುಗುತಿಹ ಧ್ರುವನ ಉನ್ನತನ ಮಾಡಿದ ನಾಮ
ಪರತತ್ತ್ವ ಇಹಕಲ್ಲವೇ ನಿನ್ನ ನಾಮ

ಚರಣದಲಹಲ್ಯೆಯ ಸೆರೆಯ ಬಿಡಿಸಿದ ನಾಮ
ಕರುಣದಲಿ ಪ್ರಹ್ಲಾದನನು ಕಾಯ್ದ ನಾಮ
ತೊರೆಯಲಕ್ರೂರನಿಗೆ ನಿಜವ ತೋರಿದ ನಾಮ
ಸ್ಮರಿಪ ಜನರಿಗೆ ಸಮಸ್ತವನಿತ್ತ ನಾಮ

ಚಂದ್ರಶೇಖರ ಗಿರಿಜೆಗೊಲಿದ ಸಿರಿಹರಿನಾಮ
ಬಂದಾ ವಿಭೀಷಣನ ಪಾಲಿಸಿದ ನಾಮ
ಕಂದ ಮುಚುಕುಂದನಿಗೆ ಕಾಮಿತವನಿತ್ತ ನಾಮ
ಸಂದ ಪಾಂಡವಪಕ್ಷ ಪಾವನವು ನಾಮ

ಅಖಿಳವೇದಪುರಾಣ ಅರಸಿ ಕಾಣದ ನಾಮ
ಸಕಲ ಯೋಗಿಜನಕೆ ಸೌಖ್ಯನಾಮ
ಪ್ರಕಟಿಸಲು ಜಗವ ಪಾವನವ ಮಾಡಿದ ನಾಮ
ರುಕುಮಿಣೀಯರಸ ವಿಟ್ಠಲ ನಿನ್ನ ನಾಮ

ಭಕ್ತಿಯಲಿ ನೆನೆವರನು ಎತ್ತಿ ಸಲಹುವ ನಾಮ
ಮುಕ್ತಿಮಾರ್ಗಕೆ ಯೋಗ್ಯ ಹರಿ ನಿನ್ನ ನಾಮ
ಎತ್ತರಕೆ ಏರಿಪುದು ಸ್ವಾಮಿ ನಿನ್ನಯ ನಾಮ
ಚಿತ್ತಜನ ಪೆತ್ತ ಶ್ರೀಹರಿಯ ನಾಮ

ವಾರಿಜಾನನೆ ತುಳಸಿಗೊಲಿದ ಹರಿನಾಮ ಕಾ-
ವೇರಿ ಮಧ್ಯದಲಿ ನೆಲಸಿದ ನಿನ್ನ ನಾಮ
ಕ್ಷೀರಸಾಗರದಲ್ಲಿ ಶಯನವಾಗಿಹ ನಾಮ
ನಾರಾಯಣ ಕೃಷ್ಣ ಹರಿ ನಿನ್ನ ನಾಮ

ಹೊಂದಿದ ಭಕ್ತವೃಂದವ ಸಲಹಿದಾ ನಾಮ
ತಂದು ಅಮೃತವ ಸುರರಿಗೆರೆದ ನಾಮ
ಅಂದಂಬರೀಷನನು ಕಾಯ್ದ ಶ್ರೀಹರಿನಾಮ
ತಂದೆ ಪುರಂದರವಿಠಲ ಹರಿ ನಿನ್ನ ನಾಮ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ



ಭಂಡನಾದೆನು ನಾನು ಸಂಸಾರದಿ

ಭಂಡನಾದೆನು ನಾನು ಸಂಸಾರದಿ

ಕಂಡು ಕಾಣದ ಹಾಗೆ ಇರಬಹುದೆ ಹರಿಯೆ

ಕಂಡ ಕಲ್ಲುಗಳಿಗೆ ಕೈಮುಗಿದು ಸಾಕಾದೆ
ದಿಂಡೆಕಾರರ ಮನೆಗೆ ಬಲು ತಿರುಗಿದೆ
ಶುಂಡಾಲನಂತೆನ್ನ ಮತಿ ಮಂದವಾಯಿತು
ಪುಂಡರೀಕಾಕ್ಷ ನೀ ಕರುಣಿಸಯ್ಯ ಬೇಗ

ನಾನಾ ವ್ರತಗಳನು ಮಾಡಿ ನಾ ಬಳಲಿದೆನು
ಏನಾದರೂ ಎನಗೆ ಫಲವಿಲ್ಲವಯ್ಯ
ಆ ನಾಡು ಈ ನಾಡು ಸುತ್ತಿ ನಾ ಕಂಗೆಟ್ಟೆ
ಇನ್ನಾದರೂ ಕೃಪೆಯ ಮಾಡಯ್ಯ ಹರಿಯೆ

ಬುದ್ಧಿಹೀನರ ಮಾತ ಕೇಳಿ ನಾ ಮರುಳಾದೆ
ಶುದ್ಧಿಯಿಲ್ಲದೆ ಮನವು ಕೆಟ್ಟುಹೋಯ್ತು
ಉದ್ಧಾರಕ ಪುರಂದರವಿಟ್ಠಲನ ತತ್ತ್ವದ
ಸಿದ್ಧಿಯನು ದಯೆಗೈದು ಉದ್ಧರಿಸು ಹರಿಯೆ



ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಬೇವು ಬೆಲ್ಲದೊಳಿಡಲೇನು ಫಲ

ಬೇವು ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದೇನು ಫಲ

ಕುಟಿಲವ ಬಿಡದಿಹ ಮನುಜರು ಮಂತ್ರವ
ಪಠನೆಯ ಮಾಡಿದರೇನು ಫಲ
ಸಟೆಯನ್ನಾಡುವ ಮನುಜರು ಸಂತತ
ನಟನೆಯ ಮಾಡಿದರೇನು ಫಲ

ಕಪಟತನದಲಿ ಕಾಡುತ ಜನರನು
ಜಪವನು ಮಾಡಿದರೇನು ಫಲ
ಕುಪಿತ ತನುವನು ಬಿಡದೆ ನಿರಂತರ
ಜಪವನು ಮಾಡಿದರೇನು ಫಲ

ಮಾತಾಪಿತರನು ಬಳಲಿಸಿದಾತನು
ಯಾತ್ರೆಯ ಮಾಡಿದರೇನು ಫಲ
ಘಾತಕತನವನು ಬಿಡದೆ ನಿರಂತರ
ಗೀತೆಯನೋದಿದರೇನು ಫಲ

ಪತಿಗಳ ನಿಂದಿಪ ಸತಿಯರು ಬಹು ವಿಧ
ವ್ರತಗಳ ಮಾಡಿದರೇನು ಫಲ
ಅತಿಥಿಗಳೆಡೆಯಲಿ ಭೇದವ ಮಾಡುತ
ಗತಿಯನು ಬಯಸಿದರೇನು ಫಲ

ಹೀನ ಗುಣಂಗಳು ಹಿಂಗದೆ ಗಂಗೆಯ
ಸ್ನಾನವ ಮಾಡಿದರೇನು ಫಲ
ಶ್ರೀನಿಧಿ ಪುರಂದರವಿಠಲನ ನೆನೆಯದೆ
ಮೌನವ ಮಾಡಿದರೇನು ಫಲ

ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ

ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ ಮಗಳೆ ಮನ
ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ

ಅತ್ತೆ ಮಾವಗಂಜಿಕೊಂಡು ನಡೆಯಬೇಕಮ್ಮ ಮಗಳೆ
ಚಿತ್ತದೊಲ್ಲಭನ ಅಕ್ಕರೆಯನ್ನು ಪಡೆಯಬೇಕಮ್ಮ
ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ ಮಗಳೆ
ಹತ್ತುಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ

ಕೊಟ್ಟು ಕೊಂಬುವ ನಂಟರೊಡನೆ ದ್ವೇಷ ಬೇಡಮ್ಮ ಮಗಳೆ
ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ
ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲಬೇಡಮ್ಮ ಮಗಳೆ
ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ

ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ ಮಗಳೆ
ಗರುವ ಕೋಪ ಮತ್ಸರವನ್ನು ಮಾಡಬೇಡಮ್ಮ
ಪರರ ನಿಂದಿಪ ಹೆಂಗಳೊಡನೆ ಸೇರಬೇಡಮ್ಮ ಮಗಳೆ
ವರಪುರಂದರವಿಠಲನ ಸ್ಮರಣೆ ಮರೆಯಬೇಡಮ್ಮ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಬಿನ್ನಹಕೆ ಬಾಯಿಲ್ಲವಯ್ಯಾ

ಬಿನ್ನಹಕೆ ಬಾಯಿಲ್ಲವಯ್ಯಾ
ಅನಂತ ಅಪರಾಧ ಎನ್ನಲ್ಲಿ ಇರಲಾಗಿ

ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೆ

ಶಿಶು ಮೋಹ ಸತಿ ಮೋಹ ಜನನಿ ಜನಕರ ಮೋಹ
ರಸಿಕ ಭ್ರಾಂತಿಯ ಮೋಹ ರಾಜಮನ್ನಣೆ ಮೋಹ
ಪಶುಮೋಹ ಭೂಮೋಹ ಬಂಧುವರ್ಗದ ಮೋಹ
ಹಸನುಳ್ಳ ಆಭರಣಗಳ ಮೋಹದಿಂದ

ಅನ್ನಮದ ಅರ್ಥಮದ ಅಖಿಳ ವೈಭವದ ಮದ
ಮುನ್ನ ಪ್ರಾಯದ ಮದವು ರೂಪಮದವು
ತನ್ನ ಸತ್ವದ ಮದ ಧಾತ್ರಿ ವಶವಾದ ಮದ
ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ

ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ
ಅಷ್ಟು ದೊರಕಿದರು ಮತ್ತಷ್ಟರಾಸೆ
ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ
ನಷ್ಟಜೀವನದಾಸೆ ಪುರಂದರವಿಠಲ




1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಈ ಕೀರ್ತನೆಯ ಆಂಗ್ಲ ಭಾಷಾಂತರಕ್ಕೆ ಇಲ್ಲಿ ಕ್ಲಿಕ್ ಮಾಡಿ

ಬಾರೋ ಬ್ರಹ್ಮಾದಿವಂದ್ಯಾ

ಬಾರೋ ಬ್ರಹ್ಮಾದಿವಂದ್ಯಾ
ಬಾರೋ ವಸುದೇವ ಕಂದ

ಧಿಗಿಧಿಗಿ ನೀ ಕುಣಿದಾಡುತ ಬಾರೋ ದೀನರಕ್ಷಕನೇ
ಜಗದೀಶಾ ಕುಣಿದಾಡುತ ಬಾರೋ ಚೆನ್ನಕೇಶವನೇ

ಗೊಲ್ಲರ ಮನೆಗೆ ಪೋಗಲು ಬೇಡ ಗೋವಿಂದಾ ಕೇಳೋ
ಹಾಲು ಬೆಣ್ಣೆ ಮೊಸರಿಕ್ಕುವೆ ನೀನುಣ್ಣಬಾರೋ

ದೊಡ್ಡ ದೊಡ್ಡ ಮುತ್ತಿನ ಹಾರವ ಹಾಕಿ ನೋಡುವೆ ಬಾರೋ
ದೊಡ್ಡಪುರದ ದ್ವಾರಕಿವಾಸ ಪುರಂದರವಿಟ್ಠಲ


ಬಾರಯ್ಯ ವೆಂಕಟರಮಣ

ಬಾರಯ್ಯ ವೆಂಕಟರಮಣ-ಭಕ್ತರ ನಿಧಿಯೆ
ಬಾರೋ ವಿಶ್ವಂಭರಣ

ತೋರೋ ನಿನ್ನಯ ದಯೆ ತೋಯಜಾಂಬಕನೆ

ವೇದಗೋಚರ ಬಾರೋ ಆದಿಕಚ್ಛಪ ಬಾರೋ
ಮೋದಗೋಚರ ಬಾರೋ ಸದಯ ನರಸಿಂಹ ಬಾರೋ

ವಾಮನ ಭಾರ್ಗವ ಬಾರೋ ರಾಮ ಕೃಷ್ಣನೆ ಬಾರೋ
ಪ್ರೇಮದ ಬುದ್ಧನೆ ಬಾರೋ ಸ್ವಾಮಿ ಕಲ್ಕಿಯೆ ಬಾರೋ

ಅರವಿಂದನಾಭ ಬಾರೋ ಸುರರ ಪ್ರಭುವೆ ಬಾರೋ
ಪುರುಹೂತವಂದ್ಯ ಬಾರೋ ಪುರಂದರವಿಠಲ ಬಾರೋ



ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಬಾ ಬಾ ರಂಗ ಭುಜಂಗಶಯನ

ಬಾ ಬಾ ರಂಗ ಭುಜಂಗಶಯನ ಕೋಮಲಾಂಗ ಕೃಪಾಪಾಂಗ

ಬಾ ಬಾ ಎನ್ನಂತರಂಗ ಮಲ್ಲರಗಜ ಸಿಂಗ ದುರಿತ ಭವಭಂಗ

ಉಭಯ ಕಾವೇರಿಯ ಮಧ್ಯನಿವಾಸ
ಅಭಯದಾಯಕ ಮಂದಹಾಸ
ಸಭೆಯೊಳು ಸತಿಯಳ ಕಾಯಿದ ಉಲ್ಲಾಸ
ಇಭವರದನೆ ಶ್ರೀನಿವಾಸ

ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆ
ಗಾಳಿಯ ದೇವರ ದೇವ
ಸೋಳಸಾಸಿರ ಗೋಪಿಯರಾಳಿದ ಈ-
ರೇಳು ಲೋಕದ ಜನ ಕಾವ

ಚಂದ್ರ ಪುಷ್ಕರಿಣಿಯ ತೀರವಿಹಾರ
ಇಂದ್ರಾದಿ ಸುರ ಪರಿವಾರ
ಚಂದ್ರಶೇಖರ ನುತನಾದ ಸುಖ-
ಸಾಂದ್ರ ಸುಗುಣ ಗಂಭೀರ

ಈಷಣತ್ರಯಗಳ ದೂಷಿತ ನಿರತ ಅ-
ಶೇಷ ವಿಭವ ಜನಪಾಲ
ಭೂಷಿತ ನಾನಾ ವಸ್ತ್ರಾಭರಣ ವಿ-
ಭೀಷಿಣಗೊಲಿದ ಸುಪ್ರಾಣ

ಶಂಬರಾರಿಯ ಪಿತ ಡಂಬರಹಿತ ಮನ
ಅಂಬುಜದಳನಿಭನೇತ್ರ
ಕಂಬುಚಕ್ರಧರ ಪುರಂದರವಿಠಲ
ತುಂಬುರು ನಾರದಕೃತ ಸ್ತೋತ್ರ

ಬಣ್ಣಿಸಿ ಗೋಪಿ ಹರಸಿದಳು

ಬಣ್ಣಿಸಿ ಗೋಪಿ ಹರಸಿದಳು

ಎಣ್ಣೆಯನೊತ್ತುತ ಯದುಕುಲ ತಿಲಕಗೆ

ಆಯುಷ್ಯವಂತನಾಗು ಅತಿ ಬಲ್ಲಿದನಾಗು
ಮಾಯದ ಖಳರ ಮರ್ದನನಾಗು
ರಾಯರ ಪಾಲಿಸು ರಕ್ಕಸರ ಸೋಲಿಸು
ವಾಯುಸುತಗೆ ನೀನೊಡೆಯನಾಗೆನುತ

ಧೀರನು ನೀನಾಗು ದಯಾಂಬುಧಿಯಾಗು
ಆ ರುಕ್ಮಿಣಿಗೆ ನೀನರಸನಾಗು
ಮಾರನ ಪಿತನಾಗು ಮಧುಸೂದನನಾಗು
ದ್ವಾರಾವತಿಗೆ ನೀ ಧೊರೆಯಾಗೆನುತ

ಆನಂದ ನೀನಾಗು ಅಚ್ಯುತ ನೀನಾಗು
ದಾನವಾಂತಕನಾಗು ದಯವಾಗು
ಶ್ರೀನಿವಾಸನಾಗು ಶ್ರೀನಿಧಿ ನೀನಾಗು
ಜ್ಞಾನಿ ಪುರಂದರವಿಠಲನಾಗೆನುತ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಬಂದು ನಿಂತಿಹ ನೋಡಿ ಭೂತಳದಿ ವೆಂಕಟ

ಬಂದು ನಿಂತಿಹ ನೋಡಿ ಭೂತಳದಿ ವೆಂಕಟ
ಇಂದಿರೆಯ ಒಡಗೂಡಿ ಒಪ್ಪುವ ನಿರಂತರ
ಪೊಂದಿ ಭಜನೆಯ ಮಾಡಿ ಆನಂದಗೂಡಿ
ವಂದಿಸುತ ಮನದೊಳಗೆ ಇವನಡಿ
ದ್ವಂದ್ವ ಭಜಿಸಲು ಬಂದ ಭಯಹರ
ಇಂದುಧರ ಸುರವೃಂದನುತ ಗೋ-
ವಿಂದ ಘನ ದಯಾಸಿಂಧು ಶ್ರೀಹರಿ

ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು
ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ-
ಗಾರ ನಿಧಿ ಅಂಗದಲ್ಲಿ ಮುತ್ತಿನಲಿ ಶೋಭಿಪ
ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ
ವಾರವಾರಕೆ ಪೂಜೆಗೊಂಬುವ
ಹಾರ ಮುಕುಟಾಭರಣ ಕುಂಡಲಧಾರ ಭುಜ ಕೇ-
ಯೂರಭೂಷಿತ ಮಾರಪಿತ ಗುಣ ಮೋಹನಾಂಗ
ಚಾರು ಪೀತಾಂಬರ ಕಟಿ ಕರವೀರ ಕ-
ಲ್ಹಾರಾದಿ ಪೂವಿನ ಹಾರ ಕೊರಳೊಳು ಎಸೆವು-
ತಿರೆ ವದನಾರವಿಂದನು ನಗುತ ನಲಿಯುತ

ಎಲ್ಲ ಭುಕುತರಭೀಷ್ಟ ಕೊಡುವುದಕೆ ತಾ ಕೈ-
ವಲ್ಯಸ್ಥಾನವ ಬಿಟ್ಟ ಶೇಷಾದ್ರಿ ಮಂದಿರ
ದಲ್ಲಿ ಲೋಲುಪ ದಿಟ್ಟ ಸೌಭಾಗ್ಯನಿಧಿಗೆದು-
ರಿಲ್ಲ ಭುಜಬಲ ಪುಷ್ಪ ಕಸ್ತೂರಿಯಿಟ್ಟ
ಚೆಲ್ವ ಫಣಿಯಲಿ ಶೋಭಿಸುವ ಸಿರಿ-
ವಲ್ಲಭನ ಗುಣ ಪೊಗಳದಿಹ ಜಗ ಖುಲ್ಲರೆದೆದಲ್ಲಣ ಪರಾಕ್ರಮ
ಮಲ್ಲಮರ್ದನ ಮಾತುಳಾರಿ ಫಲ್ಗುಣನ ಸಖ ಪ್ರಕಟನಾಗಿಹ
ದುರ್ಲಭನು ಅಘದೂರ ಬಹುಮಾಂಗಲ್ಯು ಹೃದಯನು ಸೃಷ್ಟಿಗೆ
ಉಲ್ಲಾಸ ಕೊಡುತಲಿ ಚಂದದಿಂದಲಿ

ಪದಕ ಕೌಸ್ತುಭಧಾರ ಸರಿಗೆಯ ಕಂಧರ
ಸುದರುಶನದರಧಾರ ಸುಂದರ ಮನೋಹರ
ಪದಯುಗದಿ ನೂಪುರ ಇಟ್ಟಿಹನು
ಸನ್ಮುನಿ ಹೃದಯಸ್ಥಿತ ಗಂಭೀರ ಬಹು ದಾನಶೂರ
ವಿಧಿ ಭವಾದ್ಯರ ಪೊರೆವ ದಾತನು
ತುದಿ ಮೊದಲು ಮಧ್ಯಮ ವಿರಹಿತನು ಉದುಭವಾದಿಗಳೀವ ಕರ್ತನು
ತ್ರಿದಶಪೂಜಿತ ತ್ರಿಭುವನೇಶ ಸದುವಿಲಾಸದಿ ಸ್ವಾಮಿತೀರ್ಥದಿ
ಉದಿಸುತಿರೆ ಸಿರಿ ಮಹಿಳೆ ಸಹಿತದಿ ಪದುಮನಾಭ ಪುರಂದರವಿಟ್ಠಲ ಪ್ರತಿ ವರುಷ ಬ್ರಹ್ಮೋತ್ಸವದಿ ಮೆರೆಯುತ

ಬಂದದ್ದೆಲ್ಲ ಬರಲಿ

ಬಂದದ್ದೆಲ್ಲ ಬರಲಿ ಗೋವಿಂದನ ದಯ ನಮಗಿರಲಿ

ಇಂದಿರೆ ರಮಣನ ಧ್ಯಾನವ ಮಾಡಲು
ಬಂದ ದುರಿತ ಬಯಲಾದುದಿಲ್ಲವೆ

ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು
ದುರುಳ ಕೌರವ ಬಂದು ಅತಿ ಹರುಷದಲಿರುತಿರಲಂದು
ಹರಿ ಕೃಪೆ ಅವರಲ್ಲಿದ್ದ ಕಾರಣ ಬಂದ
ಘೋರ ದುರಿತ ಬಯಲಾದುದಿಲ್ಲವೆ?

ಆರು ಒಲಿಯದಿರಲೆನ್ನ ಮುರಾರಿ ಎನಗೆ ಪ್ರಸನ್ನ
ಹೋರುವ ದುರಿತದ ಬನ್ನ ನಿವಾರಿಪ ಕರುಣ ಸಂಪನ್ನ
ಶ್ರೀರಮಣನ ಸಿರಿ ಚರಣ ಶರಣರಿಗೆ
ಕ್ರೂರ ಯಮನು ಶರಣಾಗಲಿಲ್ಲವೆ?

ಸಿಂಗನ ಪೆಗಲೇರಿದವಗೆ ಕರಿ ಭಂಗವೇಕೆ ಮತ್ತವಗೆ
ರಂಗನ ಕೃಪೆಯುಳ್ಳವಗೆ ಭವ ಭಂಗಗಳೇತಕ್ಕವಗೆ
ಮಂಗಳ ಮಹಿಮ ಪುರಂದರವಿಠಲ ಶು-
ಭಾಂಗನ ದಯವೊಂದಿದ್ದರೆ ಸಾಲದೆ

ಫಲಾಹಾರವನು ಮಾಡೊ ಪರಮಪುರುಷ

ಫಲಾಹಾರವನು ಮಾಡೊ ಪರಮಪುರುಷ ಭೂ-
ಬಲನೆ ಲಕ್ಷ್ಮೀ ಕಂದರ್ಪರ ಸಹಿತ

ಕದಳಿ ಕೆಂಬಾಳೆ ಕಿತ್ತಳೆ ಕಂಚಿಫಲಗಳು
ಬದರಿ ಬೆಳುವಲ ಜಂಬೀರ ದ್ರಾಕ್ಷೆಗಳು
ಮಧುರದ ಮಾದಾಳ ಮಾವಿನ ಹಣ್ಗಳು
ತುದಿ ಮೊದಲಿಲ್ಲದ ಪರಿಪರಿ ಫಲಗಳ

ಉತ್ತತ್ತಿ ಜಂಬು ನಾರಂಗ ದಾಳಿಂಬವು
ಮುತ್ತಾದೌದುಂಬರ ಕಾರಿಯು ಕವಳಿ
ಕತ್ತರಿಸಿದ ಕಬ್ಬು ಪಲಸು ತೆಂಗಿನಕಾಯಿ
ಒತ್ತಿದ ಬೇಳೆ ನೆಲಗಡಲೆ ಖಜ್ಜೂರ ಹಣ್ಣ

ಹಾಲು ಸಕ್ಕರೆ ಜೇನುತುಪ್ಪ ಸೀಕರಣೆಯು
ಹಾಲು ರಸಾಯನ ಬೆಣ್ಣೆ ಸೀಯಾಳು
ಮೂಲೋಕದೊಡೆಯ ಶ್ರೀಪುರಂದರವಿಠಲನೆ
ಪಾಲಿಸೋ ನಿನ್ನಯ ಕರಕುಂಜದಿಂದಲಿ

ಪೊಂಗೊಳಲನೂದುತಿಹ ಯದುಕುಲೋತ್ತುಂಗ

ಪೊಂಗೊಳಲನೂದುತಿಹ ಯದುಕುಲೋತ್ತುಂಗ

ತಿಂಗಳಾಪಾಂಗ ನೀರಾಜಿತ ಶುಭಾಂಗ

ಸಲಿಲಗಾಚಲಧರನೆ ಇಳೆಯಾಣ್ಮ ಜ್ವಲನೇತ್ರ
ಬಲಿಯ ಬೇಡಿದೆ ಭೃಗುಕುಲಜನೆನಿಸಿ
ಬಲಿದ ಬಿಲ್ಲನೆ ಮುರಿದು ಲಲನೆಯರ ವಶನಾಗಿ
ಖಳರ ಸಂಭೋಧಿಸಿದೆ ಚೆಲುವ ಹಯವೇರಿ

ಬಿಡದೆ ನೋಡಿದೆ ಬೆಟ್ಟದಡಿಗೆ ಬೆನ್ನನು ಕೊಟ್ಟೆ
ಅಡವಿಚರ ಕಡುಕೋಪಿ ಕೊಡೆಯ ಪಿಡಿದು
ಕೊಡಲಿಕೈ ಜಡೆ ಧರಿಸಿ ಗಿಡ ಹತ್ತಿ ಕೆಡಿಸಿ ಸ-
ನ್ಮಡದಿಯರ ಹಯವೇರಿ ಕಡಿದೆ ರಣಶೂರ

ವಾರಿಚರ ಕೂರ್ಮಾವತಾರ ಸೂಕರ ಹರಿಯೆ
ಧಾರುಣೆಯನಳೆದೆ ಶೂರರನು ಗೆಲಿದೆ
ನೀರಜಾಕ್ಷಿಯ ತಂದೆ ಚೋರ ವ್ರತವನಳಿದೆ ಹಯ-
ವೇರಿದನೆ ಪುರಂದರವಿಠಲ ಜಗದಯ್ಯ


ಪುಟ್ಟಿಸಬೇಡವೊ ದೇವ ಎಂದೆಂದಿಗೂ

ಪುಟ್ಟಿಸಬೇಡವೊ ದೇವ ಎಂದೆಂದಿಗೂ ಇಂಥ

ಕಷ್ಟಪಟ್ಟು ತಿರುಗುವ ಪಾಪಿ ಜೀವನವ

ನರರ ತುತಿಸಿ ನಾಲಗೆ ಬರಡು ಮಾಡಿ ಉ-
ದರ ಪೋಷಣೆಗಾಗಿ ಅವರಿವರೆನ್ನದೆ
ಧರೆಯೊಳು ಲಜ್ಜೆ ನಾಚಿಕೆಗಳನೀಡಾಡಿ
ಪರರ ಪೀಡಿಸಿ ತಿಂಬ ಪಾಪಿ ಜೀವನವ

ಎಂಟು ಗೇಣು ಶರೀರ ಒಂದು ಗೇಣು ಮಾಡಿಕೊಂಡು
ಪಂಟಿಸುತ್ತ ಮೆಲ್ಲ ಮೆಲ್ಲನೆ ಪೋಗಿ
ಗಂಟಲ ಸೆರೆಗಳುಬ್ಬಿ ಕೇಳುವ ಸಂಕಟ ವೈ-
ಕುಂಠಪತಿ ನೀನೆ ಬಲ್ಲೆ ಕಪಟನಾಟಕನೆ

ಲೆಖ್ಖದಲಿ ನೀ ಮೊದಲು ಮಾಡಿದ್ದಲ್ಲದೆ
ಸಖ್ಯಕೆ ವೆಗ್ಗಳ ಕೊಡುವರುಂಟೆ
ಕಕ್ಕುಲಾತಿಪಟ್ಟರಿಲ್ಲ ಕರುಣಾಳು ನಿನ್ನ ಮೊರೆ
ಹೊಕ್ಕೆ ಎನ್ನನು ಕಾಯೊ ಪುರಂದರವಿಠಲ

ಪಾಲಿಸೆಮ್ಮ ಮುದ್ದು ಶಾರದೆ

ಪಾಲಿಸೆಮ್ಮ ಮುದ್ದು ಶಾರದೆ ಎನ್ನ ನಾಲಿಗೆಯಲಿ ನಿಲ್ಲ ಬಾರದೆ || ಪಲ್ಲವಿ ||

ಲೋಲಲೋಚನೆ ತಾಯೆ ನಿರುತ ನಂಬಿದೆ ನಿನ್ನ || ಅನುಪಲ್ಲವಿ ||

ಅಕ್ಷರಕ್ಷರ ವಿವೇಕವಾ ನಿನ್ನ ಕುಕ್ಷಿಯೊಳಿರೆ
ಏಳು ಲೋಕವ ಸಾಕ್ಷಾತ್ ರೂಪದಿಂದ
ಒಲಿದು ರಕ್ಷಿಸು ತಾಯೆ || ೧ ||

ಶೃಂಗಾರಪುರ ನೆಲೆವಾಸಿನೀ ದೇವಿ
ಸಂಗೀತಗಾನ ವಿಲಾಸಿನೀ
ಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ || ೨ ||

ಸರ್ವಾಲಂಕಾರ ದಯಾಮೂರುತಿ ನಿನ್ನ
ಚರಣವ ಸ್ಮರಿಸುವೆ ಕೀರುತಿ
ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ || ೩ ||

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ


ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ
ಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆ

ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ

ವೇದಾಭಿಮಾನಿ ಸಾರಸಾಕ್ಷಿ
ಶ್ರೀಧರರಮಣಿ
ಕಾದುಕೊ ನಿನ್ನಯ ಪಾದಸೇವಕರನ್ನು
ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ

ದಯದಿಂದ ನೋಡೆ ಭಜಿಪ ಭಕ್ತರ
ಭಯ ದೂರ ಮಾಡೆ
ದಯಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆ
ಜಯದೇವಿ ಸುವ್ರತೆ ಜಗದೀಶನ ಪ್ರೀತೆ

ನೀನಲ್ಲದನ್ಯ ರಕ್ಷಿಪರನು
ಕಾಣೆ ನಾ ಮುನ್ನ
ದಾನವಾಂತಕ ಸಿರಿ ಪುರಂದರವಿಠಲನ
ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ


1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಪಾಪೋಸು ಹೋದುವಲ್ಲ ಸ್ವಾಮಿ

ಪಾಪೋಸು ಹೋದುವಲ್ಲ ಸ್ವಾಮಿ ಎನ್ನ
ಪಾಪೋಸು ಹೋದುವಲ್ಲ

ಅಪಾರ ದಿನಗಳಿಂದ ಅರ್ಜನೆ ಮಾಡಿದ

ಉರಗಾದ್ರಿಯಲಿ ಸ್ವಾಮಿಪುಷ್ಖರಣಿ ಮೊದಲಾದ
ಪರಿಪರಿ ತೀರ್ಥ ಸ್ನಾನಗಳ ಮಾಡಿ
ಹರಿದಾಸರ ಕೂಡಿ ಗಿರಿರಾಯನ ಮೂರ್ತಿ
ದರುಶನದಲ್ಲಿ ಮೈಮರೆತಿರಲು ಎನ್ನ

ಪರಮ ಭಾಗವತರ ಹರಿಕಥೆ ಕೇಳಲು
ಪರಮ ಭಕುತಿಯಿಂದ ಕೇಳುತಿರೆ
ಪರಮ ಪಾಪಿಗಳ ಪಾಲಾಗಿ ಪೋದುವು
ಪರಮ ಪುರುಷನ ಮನಸಿಗೆ ಬಂದೀಗ

ಮಾಯಾದೇವಿ ಎನಗೆ ಮೆಚ್ಚಿ ಕೊಟ್ಟಿದ್ದಳು
ದಾಯಾದಿಗಳು ನೋಡಿ ಸಹಿಸಲಿಲ್ಲ
ಮಾಯಾರಮಣ ನಮ್ಮ ಪುರಂದರವಿಠಲನ
ಮಾಯದಿಂದಲಿ ಮಟ್ಟಮಾಯವಾದವು ಎನ್ನ

ಪಾಪಿ ಬಲ್ಲನೆ ಪರರ ಸುಖ ದುಃಖವ

ಪಾಪಿ ಬಲ್ಲನೆ ಪರರ ಸುಖ ದುಃಖವ

ಕೋಪಿ ಬಲ್ಲನೆ ಶಾಂತ ಸುಗುಣದ ಘನವ
ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ
ಮೃತ್ಯು ಬಲ್ಲುದೆ ವೇಳೆ ಹೊತ್ತೆಂಬುದ
ತೊತ್ತು ಬಲ್ಲಳೆ ಮಾನಾಪಮಾನವೆಂಬುದನು
ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲನು

ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ
ಶ್ವಾನ ಬಲ್ಲುದೆ ರಾಗ ಭೇದಂಗಳ
ಮೀನು ಬಲ್ಲುದೆ ನೀರು ಸೌಳು ಸ್ವಾದೆಂಬುದನು
ತಾನು ಬಲ್ಲುದೆ ಹಾವು ಹಾಲನೆರೆದವರನು

ಬಾಳೆ ಬಲ್ಲುದೆ ಮರಳಿ ಫಲವಾಗೊ ಸುದ್ದಿಯನು
ಸೂಳೆ ಬಲ್ಲಳೆ ವಿಟನ ಬಡತನವನು
ಕೇಳಬಲ್ಲನೆ ಕಿವುಡನೇಕಾಂತ ಮಾತುಗಳ
ಹೇಳಬಲ್ಲನೆ ಮೂಕ ಕನಸು ಕಂಡುದನು

ಕಾಗೆ ಬಲ್ಲುದೆ ಒಳ್ಳೆ ಕೋಗಿಲೆಯ ಸುಸ್ವರವ
ಗೂಗೆ ಬಲ್ಲುದೆ ಹಗಲು ಹರಿದಾಟವ
ಜೋಗಿ ಬಲ್ಲನೆ ಮನೆಯೊಳಿಲ್ಲ ಉಂಟೆಂಬುದನು
ರೋಗಿ ಬಲ್ಲನೆ ಷಡ್ರಸಾನ್ನರುಚಿಯ

ಕೋಡಗವು ಬಲ್ಲುದೆ ರತ್ನದಾಭರಣವನು
ಹೇಡಿ ಬಲ್ಲನೆ ರಣದ ಸಂಭ್ರಮವನು
ಬೇಡಿದ ವರಗಳ ಪುರಂದರವಿಠಲನಲ್ಲದೆ
ನಾಡಾಡಿ ದೈವಗಳು ಕೊಡಬಲ್ಲುವೆ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಪವಡಿಸು ಪರಮಾತ್ಮನೆ ಸ್ವಾಮಿ

ಪವಡಿಸು ಪರಮಾತ್ಮನೆ ಸ್ವಾಮಿ

ಭವರೋಗ ವೈದ್ಯನೆ ಭಕ್ತರ ಪ್ರಿಯನೆ

ಕುಂದಣದಿ ರಚಿಸಿದ ಸೆಜ್ಜೆ ಮನೆಯಲ್ಲಿ
ಇಂದ್ರನೀಲಮಣಿ ಮಂಟಪದಿ
ಚಂದ್ರಕಾಂತಿಯ ಠಾಣದೀವಿಗೆ ಹೊಳೆಯಲು
ಸಿಂಧುತನಯೆ ಆನಂದದಿಂದ

ತೂಗುಮಂಚದಿ ಹಂಸತೂಲದ ಹಾಸಿಗೆ
ನಾಗಸಂಪಿಗೆ ಹೂವಿನ ಒರಗು
ಸಾಗರಸುತೆ ಸಮ್ಮೇಳದಲಿ ನಿಜ
ಭೋಗದಿಂದ ಓಲಾಡುತಲಿ

ಸದ್ದಡಗಿತು ಸಮಯ ಸಾಗಿತು ಬೀಗ
ಮುದ್ರೆಗಳಾಯಿತು ಬಾಗಿಲಿಗೆ
ತಿದ್ದಿದ ಛಾವಣಿ ಶಂಖದ ಫೋಷಣೆ
ಪದ್ಮನಾಭ ಶ್ರೀ ಪುರಂದರವಿಠಲ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಪರಾನ್ನವೇತಕೆ ಬಂತಯ್ಯ

ಪರಾನ್ನವೇತಕೆ ಬಂತಯ್ಯ ಎನಗೆ ಇಂದು
ಪರಾನ್ನವೇತಕೆ ಬಂತಯ್ಯ?

ಪರಾನ್ನವೇತಕೆ ಬಂತು ಪರಮೇಷ್ಟಿಜನಕನ
ಪರನೆಂದು ತಿಳಿಸದೆ ಪರಗತಿ ಕೆಡಿಸುವ

ಸ್ನಾನವ ಮಾಡಿಕೊಂಡು ಕುಳಿತು ಬಹು
ಮೌನದಿಂದಿರಲಿಸದು
ಶ್ರೀನಿವಾಸನ ಧ್ಯಾನಮಾಡದೆ ಮನವಿದು
ತಾನೆ ಓಡುವುದು ಶ್ವಾನನೋಪಾದಿಯಲಿ

ಜಪವ ಮಾಡುವ ಕಾಲದಿ ಕರೆಯ ಬರೆ
ವಿಪರೀತವಾಗುವುದು
ಸ್ವಪನದಂತೆ ಪೊಳೆದು ನನ್ನ ಮನಕೆ ಬಲು
ಸುಪಥವ ತಪ್ಪಿಸಿ ಅಪಗತಿ ಕೊಡುವಂಥ

ಪ್ರಸ್ಥದ ಮನೆಯೊಳಗೆ ಕರೆಯದೆ ಪೋಗಿ
ಸ್ವಸ್ಥದಿ ಕುಳಿತುಕೊಂಡು
ವಿಸ್ಥಾರವಾಗಿ ಹರಟೆಯನೆ ಬಡಿದು ಪ್ರ-
ಶಸ್ತವಾಯಿತು ಎಂದು ಮಸ್ತಕ ತಿರುವುವ

ಯಜಮಾನನು ಮಾಡಿದ ಪಾಪಂಗಳ
ವ್ರಜವು ಅನ್ನದೊಳಿರಲು
ದ್ವಿಜರು ಭುಂಜಿಸಲಾಗಿ ಅವರ ಉದರದೊಳು
ನಿಜವಾಗಿ ಸೇರುವುದು ಸುಜನರು ಲಾಲಿಸಿ

ಮಾಡಿದ ಮಹಾಪುಣ್ಯವ ಓದನಕಾಗಿ
ಕಾಡಿಗೊಪ್ಪಿಸಿಕೊಡುತ
ರೂಢಿಗಧಿಕನಾದ ಪುರಂದರವಿಠಲನ
ಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ

ಪರಾಕು ಮಾಡದೆ ಪರಾಂಬರಿಸಿ

ಪರಾಕು ಮಾಡದೆ ಪರಾಂಬರಿಸಿ ಎನ್ನ ಅ-
ಪರಾಧಂಗಳ ಕ್ಷಮಿಸೋ

ಧರಾರಮಣ ಫಣಿಧರಾಮರಾರ್ಚಿತ
ಸುರಾಧಿಪತಿ ವಿಧಿ ಹರಾದಿ ವಂದಿತ

ನರರೊಳಗೆ ಪಾಮರನು ನಾನಿಹ
ಪರಕೆ ಸಾಧನವರಿಯೆ ಶ್ರೀ ಹರಿಯೆ
ಶರಣು ಹೊಕ್ಕೆ ನಿನ್ನ ಚರಣ ಕಮಲಕೆ
ಕರುಣದಿಂದ ನಿನ್ನ ಸ್ಮರಣೆ ಎನಗಿತ್ತು

ಜಪವನರಿಯೆನು ತಪವನರಿಯೆನು
ಉಪವಾಸ ವ್ರತಗಳನರಿಯೆ ಶ್ರೀ ಹರಿಯೆ
ಕೃಪಾವಲೋಕನದಿ ಆ ಪಾಪಗಳನೆಲ್ಲ
ಅಪಹೃತವ ಮಾಡೊ ಅಪಾರ ಮಹಿಮನೆ

ಕರಿರಾಜನುದ್ಧರಿಸಿ ದ್ರೌಪದಿಯ
ಮೊರೆ ಲಾಲಿಸಿ ತರಳನಿಗೊಲಿದು ನೀ ಪೊರೆದೆ
ಸಿರಿಯರಸ ನಿನ್ನ ಸರಿ ಯಾರ ಕಾಣೆ
ಪುರಾರಿನುತ ಸಿರಿ ಪುರಂದರವಿಠಲ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ













ನೋಡುವುದೇ ಕಣ್ಣು ಕೇಳುವುದೇ ಕಿವಿ

ನೋಡುವುದೇ ಕಣ್ಣು ಕೇಳುವುದೇ ಕಿವಿ
ಪಾಡುವುದೇ ವದನ

ಗಾಡಿಕಾರ ಶ್ರೀ ವೇಣುಗೋಪಾಲನ
ಕೂಡಿ ಕೊಂಡಾಡುವ ಸುಖದ ಸೊಬಗನು

ಪೊಂಗಳಲೂದುತ ಮೃಗಪಕ್ಷಿಗಳನೆಲ್ಲ
ಸಂಗಳಿಸುತಲಿಪ್ಪನ
ಅಂಗಜ ಜನಕ ಗೋಪಾಂಗನೇರೊಡನೆ ಬೆಳ-
ದಿಂಗಳೊಳಗೆ ಸುಳಿದಾಡೊ ರಂಗಯ್ಯನ

ನವಿಲಂತೆ ಕುಣಿವ ಹಂಸೆಯಂತೆ ನಲಿವ
ಮರಿ ಕೋಗಿಲೆಯಂತೆ ಕೂಗುವ
ಎರಳೆಯ ಮರಿಯಂತೆ ಜಿಗಿಜಿಗಿದಾಡುವ
ತುಂಬಿ ಝೇಂಕರಿಸುವಂದದಿ ಝೇಂಕರಿಪನ

ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ ಮಾಡಿ
ಸೆರೆಯ ಬಿಡಿಸಿಕೊಂಬನ
ಗರುಡಗಮನ ಸಿರಿ ಪುರಂದರವಿಠಲನ
ಶರಣಾಗತ ಸುರಧೇನು ರಂಗಯ್ಯನ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನೋಡದಿರು ಪರಸ್ತ್ರೀಯರ

ನೋಡದಿರು ಪರಸ್ತ್ರೀಯರ
ನೋಡಿದರೆ ಕೇಡಹುದು ತಪ್ಪದಿದಕೋ

ನೋಡಿದರೆ ಸ್ತ್ರೀ ಹತ್ಯವು, ನುಡಿಸಿ ಮಾ-
ತಾಡಿದರೆ ಗೋಹತ್ಯವು
ಕಾಡಿದರೆ ಶಿಶುಹತ್ಯವು ಮೈ-
ಗೂಡಿದರೆ ಬ್ರಹ್ಮಹತ್ಯವು

ಎರಳೆಗಂಗಳರೊಲುಮೆಗೆ ಮರುಳಾಗಿ
ಬರಿದೆ ನೀ ಕೆಡಬೇಡವೊ
ದುರುಳ ಯಮಲೋಕದಲ್ಲಿ ಕರೆದೊಯ್ದು
ಉರಿಗಂಬ ಅಪ್ಪಿಸುವರೊ

ಮರುಳು ಮಾನವನೆ ಕೇಳೊ ಪರಸತಿಯ
ಉರಿಯೆಂದು ನೋಡು ನಿತ್ಯ
ವರದ ಪುರಂದರವಿಠಲನ ನೆನೆದರೆ
ಸ್ಥಿರವಾದ ಮುಕುತಿಯಹುದು

ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ

ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ
ದಿವ್ಯಷಡುರಸಾನ್ನವನಿಟ್ಟೆನೊ

ಘಮಘಮಿಸುವ ಶಾಲ್ಯಾನ್ನ ಪಂಚಭಕ್ಷ್ಯ
ಅಮೃತಕೂಡಿದ ದಿವ್ಯ ಪರಮಾನ್ನವು
ರಮಾದೇವಿಯರು ಸ್ವಹಸ್ತದಿ ಮಾಡಿದ ಪಾಕ
ಭೂ ಮೊದಲಾದ ದೇವೇರ ಸಹಿತೌತಣ

ಅರವತ್ತು ಶಾಕ ಲವಣಶಾಕ ಮೊದಲಾದ
ಸರಸ ಮೊಸರು ಬುತ್ತಿ ಚಿತ್ರಾನ್ನವು
ಪರಮಮಂಗಳ ಅಪ್ಪಾವು ಅತಿರಸಗಳ
ಹರುಷದಿಂದಲಿ ಇಟ್ಟ ಹೊಸ ತುಪ್ಪವು

ಒಡೆಯಂಬೊಡೆ ದಧಿವಡೆಯು ತಿಂಥಿಣಿ
ಒಡೆಯ ಎಡೆಗೆ ಒಡನೆ ಬಡಿಸಿದೆ
ದೃಢವಾದ ಪದಾರ್ಥವನ್ನೆಲ್ಲ ಇಡಿಸಿದೆ
ಒಡೆಯ ಶ್ರೀ ಪುರಂದರವಿಠಲನೆ ಉಣ್ಣೊ

ನೆಚ್ಚನಯ್ಯ ಹರಿ ಮೆಚ್ಚನಯ್ಯ

ನೆಚ್ಚನಯ್ಯ ಹರಿ ಮೆಚ್ಚನಯ್ಯ

ಉತ್ತಮನೆಂದೆನಿಸಿಕೊಂಡು ಅರುಣೋದಯದ ಕಾಲದಲ್ಲಿ
ನಿತ್ಯ ಕಾಗೆಯ ಹಾಗೆ ನೀರೊಳಗೆ ಮುಳುಗುವವಗೆ

ತೊಗಲಿನ ದೇಹಕೆ ಗೋಪೀಗಂಧ ತೇದುಕೊಂಡು
ರೋಗ ಬಂದೆಮ್ಮೆಯಹಾಗೆ ಬರೆದುಕೊಂಬ ಮನುಜಗೆ

ಮರುಳುತನವು ಮಾತಿನಲ್ಲಿ ಹೃದಯದಲ್ಲಿ ವಿಷದ ಗುಟಿಕೆ
ಮರದ ಮೇಲಣ ಓತಿಯಂತೆ ನಮಿಸುವಂಥ ದುರುಳನಿಗೆ

ಹಣವಿಗೆ ಹಾರೈಸಿಕೊಂಡು ತಿರುಪತಿಗೆ ಹೋಹರ ಕಂಡು
ಹಣ ಕಾಸು ಕೊಂಡು ಬಂದು ಸ್ವಾಮಿಯ ನೋಡುವವಗೆ

ಬಾಯಿ ಬೀಗದಲ್ಲಿ ಹೋಯ್ದು ಹಾಲು ತುಪ್ಪಗಳನು ಸವಿದು
ಮೈಯು ಹುಳಿತ ನಾಯಿಯಂತೆ ಬೀದಿ ಬೀದಿ ತಿರುಗುವವಗೆ

ತಾನು ತನ್ನ ಮನೆಯ ಒಳಗೆ ದಾನ ಧರ್ಮಗಳನು ಕೊಡದೆ
ನೀನು ದಾನ ಮಾಡು ಎಂದು ಅನ್ಯರಿಗೆ ಹೇಳುವವಗೆ

ಏಕೋ ಭಾವ ಏಕೋಭಕ್ತಿ ಏಕೋಯುಕ್ತಿ ಏಕೋಮುಕ್ತಿ
ಬೇಕಾಗಿ ಪುರಂದರವಿಠಲನ್ನ ಭಜಿಸದವಗೆ

ನೀನ್ಯಾಕೋ ನಿನ್ನ ಹಂಗ್ಯಾಕೋ

ನೀನ್ಯಾಕೋ ನಿನ್ನ ಹಂಗ್ಯಾಕೋ
ನಿನ್ನ ನಾಮಾದ ಬಲವೊಂದಿದ್ದರೆ ಸಾಕೊ

ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮ ಎಂಬ ನಾಮವೆ ಕಾಯ್ತೊ

ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ
ಬಾಲಕೃಷ್ಣನೆಂಬ ನಾಮವೆ ಕಾಯ್ತೊ

ಯಮನ ದೂತರು ಬಂದು ಅಜಾಮಿಳನೆಳೆವಾಗ
ನಾರಾಯಣನೆಂಬ ನಾಮವೆ ಕಾಯ್ತೊ

ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿಮೂಲನೆಂಬ ನಾಮವೆ ಕಾಯ್ತೊ

ಪ್ರಹ್ಲಾದನ ಪಿತ ಬಾಧಿಸುತಿರುವಾಗ
ನಾರಸಿಂಹನೆಂಬ ನಾಮವೆ ಕಾಯ್ತೊ

ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ
ವಾಸುದೇವನೆಂಬ ನಾಮವೆ ಕಾಯ್ತೊ

ನಿನ್ನ ನಾಮಕೆ ಸರಿ ಯಾವುದು ಕಾಣೆನೊ
ಘನ್ನ ಮಹಿಮ ಸಿರಿ ಪುರಂದರವಿಠಲ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನೀನೆ ದಯಾಳೊ ನಿರ್ಮಲಚಿತ್ತ ಗೋವಿಂದ

ನೀನೆ ದಯಾಳೊ ನಿರ್ಮಲಚಿತ್ತ ಗೋವಿಂದ
ನಿಗಮಗೋಚರ ಮುಕುಂದ

ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು
ಮಾನದಿಂದಲಿ ಕಾವ ಧೊರೆಗಳ ನಾ ಕಾಣೆ

ದಾನವಾಂತಕ ದೀನಜನಮಂದಾರನೆ
ಧ್ಯಾನಿಪರ ಮನಸಂಚಾರನೆ
ಮೌನವಾದೆನು ನಿನ್ನ ಧ್ಯಾನಾನಂದದಿ ಈಗ
ಸಾನುರಾಗದಿ ಕಾಯೊ ಸನಕಾದಿವಂದ್ಯನೆ

ಬಗೆ ಬಗೆಯಲಿ ನಿನ್ನ ತುತಿಪೆನೊ ನಗಧರ
ಖಗಪತಿವಾಹನನೆ
ಮಗುವಿನ ಮಾತೆಂದು ನಗುತ ಕೇಳುತ ಬಂದೆ
ಬೇಗದಿಂದಲಿ ಕಾಯೊ ಸಾಗರಶಯನನೆ

ಮಂದರಧರ ಅರವಿಂದಲೋಚನ ನಿನ್ನ
ಕಂದನೆಂದೆಣಿಸೊ ಎನ್ನ
ಸಂದೇಹವೇಕಿನ್ನು ಸ್ವಾಮಿ ಮುಕುಂದನೆ
ಬಂದೆನ್ನ ಕಾಯೊ ಶ್ರೀಪುರಂದರವಿಠಲ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ


ನೀನೆ ಅನಾಥಬಂಧು ಕಾರುಣ್ಯಸಿಂಧು

ನೀನೆ ಅನಾಥಬಂಧು ಕಾರುಣ್ಯಸಿಂಧು

ಮದಗಜವೆಲ್ಲ ಕೂಡಿದರೇನು ಅದರ ವ್ಯಾಳ್ಯಕೆ ಒದಗಲಿಲ್ಲ
ಮದನನಯ್ಯ ಮಧುಸೂದನ ಎನ್ನಲು
ಮುದದಿಂದಲಿ ಬಂದೊದಗಿದೆ ಕೃಷ್ಣಾ

ಪತಿಗಳೈವರಿದ್ದರೇನು ಸತಿಯ ಭಂಗ ಬಿಡಿಸಲಿಲ್ಲ
ಗತಿ ನೀನೇ ಮುಕುಂದ ಎನ್ನಲು
ಅತಿವೇಗದಿ ಅಕ್ಷಯವಿತ್ತೆ ಕೃಷ್ಣಾ

ಶಿಲೆಯ ರಕ್ಷಿಸಿ ಕುಲಕೆ ತಂದೆ
ಬಲಿಗೆ ಒಲಿದು ಪದವಿಯಿತ್ತೆ
ಸುಲಭದಿ ಭಕ್ತರ ಸಲುಹುವ ನಮ್ಮ
ಚೆಲುವ ಪುರಂದರವಿಟ್ಠಲರಾಯ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನಿಲ್ಲಬೇಕಯ್ಯ ಕೃಷ್ಣಯ್ಯ

ನಿಲ್ಲಬೇಕಯ್ಯ ಕೃಷ್ಣಯ್ಯ ನೀ

ನಿಲ್ಲಬೇಕಯ್ಯ ಮಲ್ಲಮರ್ದನ ಸಿರಿ
ವಲ್ಲಭ ಎನ್ನ ಹೃದಯದಲ್ಲಿ ಸತತ ನೀ

ಚುಪ್ಪಾಣಿ ಮುತ್ತಿಟ್ಟು ನೋಡುವೆ ನಿನ್ನ
ಚಪ್ಪಾಳಿ ತಟ್ಟಿ ನಾ ಪಾಡುವೆ
ಅಪ್ಪ ಶ್ರೀಕೃಷ್ಣ ನಿನ್ನೆತ್ತಿ ಮುದ್ದಿಸಿಕೊಂಬೆ
ಸರ್ಪಶಯನ ಕೃಪೆ ಮಾಡೆಂದು ಬೇಡುವೆ

ಚಂದದ ಹಾಸಿಗೆ ಹಾಸುವೆ ಪುನುಗು
ಗಂಧ ಕಸ್ತೂರಿಯ ಪೂಸುವೆ
ತಂದು ಮುದದಿ ಮುತ್ತಿನ ಹಾರ ಹಾಕುವೆ ಆ-
ನಂದದಿಂದಲಿ ನಿನ್ನ ಎತ್ತಿ ಮುದ್ದಿಸಿಕೊಂಬೆ

ನೀಲದ ಕಿರೀಟವನಿಡುವೆ ಬಲು
ಬಾಲಲೀಲೆಗಳ ಪಾಡುವೆ
ಚೆಲುವ ಶ್ರೀ ಪುರಂದರವಿಠಲರಾಯನೆ
ನಿಲ್ಲು ಎನ್ನ ಮನದಲ್ಲಿ ಒಂದೆ ಘಳಿಗೆ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ

ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ

ಸಮ್ಮತಿಂದ ನಾವು ನೀವು ಸಾಟಿ ಮಾಡಿ ನೋಡುವ

ಹೇಮ ಹೊನ್ನು ಹಣಗಳಿಗೆ ಹೇರಳ ಭಯಗಳುಂಟು
ರಾಮನಾಮ ದ್ರವ್ಯಕಿನ್ನು ಯಾರ ಭಯವಿಲ್ಲವಯ್ಯ

ಕಡಗ ಕಂಠಮಾಲೆಗಳಿಗೆ ಕಳ್ಳರ ಅಂಜಿಕೆಯುಂಟು
ಅಡವಿ ತುಳಸಿಮಾಲೆಗಿನ್ನು ಅರ ಅಂಜಿಕಿಲ್ಲವಯ್ಯ

ವ್ಯಾಪಾರ ಉದ್ಯೋಗಕಿನ್ನು ವ್ಯಾಕುಲದ ಭಯವುಂಟು
ಗೋಪಾಳದ ವೃತ್ತಿಗಿನ್ನು ಗೊಡವೆ ಯಾರದಿಲ್ಲವಯ್ಯ

ಸರಕು ಬೆಲ್ಲ ತುಪ್ಪ ಧಾನ್ಯ ಸವೆದೀತೆಂಬ ಚಿಂತೆಯುಂಟು
ಹರಿನಾಮಮೃತಕೆ ಇನ್ನು ಯಾವ ಚಿಂತೆಯಿಲ್ಲವಯ್ಯ

ನಿಮ್ಮ ಭಾಗ್ಯ ಲಕ್ಷ್ಮೀದೇವಿ ನಮ್ಮ ಭಾಗ್ಯ ನಾರಾಯಣನು
ನಮ್ಮ ನಿಮ್ಮ ಭಾಗ್ಯದೊಡೆಯ ಪುರಂದರವಿಠಲನು

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನಿನ್ನನೇ ನಂಬಿದೆನು ನೀನೆನ್ನ ಸಲಹಯ್ಯ

ನಿನ್ನನೇ ನಂಬಿದೆನು ನೀನೆನ್ನ ಸಲಹಯ್ಯ

ಎನ್ನ ಗುಣದೋಷಗಳನೆಣಿಸಬೇಡಯ್ಯ

ಬಾಲ್ಯದಲಿ ಕೆಲವು ದಿನ ಬರಿದೆ ಹೋಯಿತು ಹೊತ್ತು
ಮೇಲೆ ಯೌವನ ಮದದಿ ಮುಂದರಿಯದಿದ್ದೆ
ಜಾಲ ಸಂಸಾರದಲಿ ಸಿಲುಕಿ ಬಳಲಿದೆನಯ್ಯ
ಪಾಲಿಸೋ ಪರಮಾತ್ಮ ಭಕ್ತಿಯ ಕೊಟ್ಟು

ಆಸೆಯೆಂಬುದು ಅಜನ ಲೋಕವನು ಮುಟ್ಟುತಿದೆ
ಬೇಸರದು ಸ್ತ್ರೀಯರಲಿ ಬುದ್ಧಿಯೆನಗೆ
ವಾಸುದೇವನ ಸ್ಮರಣೆಯೊಮ್ಮೆಯಾದರು ಇಲ್ಲ
ಕ್ಲೇಶವನು ಬಿಡಿಸಿ ನಿನ್ನ ದಾಸನೆನಿಸಯ್ಯ

ಈ ತೆರದಿ ಕಾಲವನು ಇಂದಿರೇಶನೆ ಕಳೆದೆ
ಭೀತಿಯಿಲ್ಲದೆ ಜ್ಞಾನರಹಿತನಾಗಿ
ಮಾತೆ ತನ್ನಯ ಶಿಶುವ ಮನ್ನಿಸುವ ತೆರನಂತೆ
ದಾತ ಪುರಂದರವಿಠಲ ದಯಮಾಡಿ ಸಲಹೊ

ನಿನ್ನ ನೋಡಿ ಧನ್ಯನಾದೆನೊ

ನಿನ್ನ ನೋಡಿ ಧನ್ಯನಾದೆನೊ ಹೇ ಶ್ರೀನಿವಾಸ

ನಿನ್ನ ನೋಡಿ ಧನ್ಯನಾದೆ ಎನ್ನ ಮನೋನಯನಕೀಗ-
ಇನ್ನು ದಯಮಾಡು ಸುಪ್ರಸನ್ನ ಸ್ವಾಮಿ ಪಾಂಡುರಂಗ

ಪಕ್ಷಿವಾಹನ ಲಕ್ಷ್ಮೀರಮಣ
ಲಕ್ಷ್ಮಿ ನಿನ್ನ ವಕ್ಷದಲ್ಲಿ
ರಕ್ಷ ಶಿಕ್ಷಣದಕ್ಷ ಪಾಂಡವ
ಪಕ್ಷ ರಕ್ಷ ಕಮಲಾಕ್ಷ

ದೇಶದೇಶ ತಿರುಗಿ ನಾನು
ಆಶಾಬದ್ಧನಾದೆ ಸ್ವಾಮಿ
ದಾಸನು ನಾನಲ್ಲವೆ ಜಗ-
ದೀಶ ಶ್ರೀಶ ಶ್ರೀನಿವಾಸ

ಕಂತುಜನಕ ಕೇಳೊ ನೀ ನಿ-
ರಂತರದಿ ನಿನ್ನ ಸೇವೆ
ಅಂತರಂಗದಿ ಪಾಲಿಸಯ್ಯ
ಹೊಂತಕಾರಿ ಪುರಂದರವಿಠಲ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನಿನ್ನ ಆಶ್ರಯಿಸುವೆ ನಿಗಮಗೋಚರ

ನಿನ್ನ ಆಶ್ರಯಿಸುವೆ ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೊ ಮನದಿಷ್ಟವೀಯೊ

ಕುಂದಣದ ಆಶ್ರಯ ನವರತ್ನಗಳಿಗೆಲ್ಲ
ಚಂದಿರನ ಆಶ್ರಯ ಚಕೋರಗೆ
ಕಂದರ್ಪನಾಶ್ರಯ ವಸಂತಕಾಲಕೆ, ಗೋ-
ವಿಂದನಾಶ್ರಯ ಮರಣಕಾಲದೊಳಗೆ

ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವು
ಪುಣ್ಯವುಳ್ಳ ನದಿಗಳು ಋಷಿಗಳಾಶ್ರಯವು
ಕಣ್ಣಿಲ್ಲದಾತಗೆ ಕೈಗೋಲಿನಾಶ್ರಯವು
ಎನ್ನಿಷ್ಟ ಪಡೆವರೆ ನಿನ್ನ ಆಶ್ರಯವು

ಪತಿವ್ರತೆ ವನಿತೆಗೆ ಪತಿಯೊಂದೆ ಆಶ್ರಯವು
ಯತಿಗನುಶ್ರುತ ಪ್ರಣವಾಶ್ರಯವು
ಮತಿಯುತ ನರಗೆ ಹರಿಸ್ತುತಿಗಳೇ ಆಶ್ರಯವು
ಹಿತವಾದ ಪುರಂದರವಿಠಲನಾಶ್ರಯವು

ನಾರಾಯಣ ನಿನ್ನ ನಾಮದ ಸ್ಮರಣೆಯ

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ನಾಲಿಗೆಗೆ ಬರಲಿ

ಕೂಡುವಾಗಲು ನಿಂತಾಡುವಾಗಲು ಮತ್ತೆ
ಹಾಡುವಾಗಲು ಹರಿದಾಡುವಾಗಲು
ಖೋಡಿ ವಿನೋದದಿ ನೋಡದೆ ನಾ ಬಲು
ಮಾಡಿದ ಪಾಪ ಬಿಟ್ಟೋಡಿ ಹೋಗೊ ಹಾಂಗೆ

ಊರಿಗೆ ಹೋಗಲಿ ಊರೊಳಗಿರಲಿ
ಕರಣಾರ್ಥಂಗಳೆಲ್ಲ ಕಾದಿರಲಿ
ವಾರಿಜನಾಭ ನರಸಾರಥಿ ನಿನ್ನನು
ಸಾರಿಸಾರಿಗೆ ನಾ ಬೇಸರದಹಾಂಗೆ

ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ
ಕಸವಿಸಿಯಿರಲಿ ಹರುಷವಿರಲಿ
ವಸುದೇವಾತ್ಮಜ ಶಿಶುಪಾಲಕ್ಷಯ
ಅಸುರಾಂತಕ ನಿನ್ನ ಹೆಸರು ಮರೆಯದಹಾಂಗೆ

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರು ಮತಿಗೆಟ್ಟಿರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಮಂತ್ರದ ನಾಮದ

ಕನಸಿನೊಳಾಗಲಿ ಕಳವಳಿಕಾಗಲಿ
ಮನಸುಗೊಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ಚರಣಕಮಲವನು
ಮನಸಿನೊಳಗೆ ಒಮ್ಮೆ ನೆನಸಿಕೊಳ್ಳುವ ಹಾಗೆ

ಜ್ವರ ಬಂದಾಗಲು ಚಳಿ ಬಂದಾಗಲು
ಮರಳಿ ಮರಳಿ ಮತ್ತೆ ನಡುಗುವಾಗ
ಹರಿನಾರಾಯಣ ದುರಿತನಿವಾರಣೆಂದು
ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ

ಸಂತತ ಹರಿ ನಿನ್ನ ಸಾಸಿರನಾಮವ
ಅಂತರಂಗದಾ ಒಳಗಿರಿಸಿ
ಎಂತೋ ಪುರಂದರವಿಟ್ಠಲರಾಯನೆ
ಅಂತ್ಯಕಾಲದಲಿ ಚಿಂತಿಸೊ ಹಾಂಗೆ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನಾರಾಯಣ ತೇ ನಮೋ ನಮೋ

ನಾರಾಯಣ ತೇ ನಮೋ ನಮೋ ಭವ
ನಾರದ ಸನ್ನುತ ನಮೋ ನಮೋ

ಮುರಹರ ನಗಧರ ಮುಕುಂದ ಮಾಧವ
ಗರುಡಗಮನ ಪಂಕಜನಾಭ
ಪರಮಪುರುಷ ಭವ ಭಂಜನ ಕೇಶವ
ನರಹರಿ ಶರೀರ ನಮೋ ನಮೋ

ಜಲಧಿ ಶಯನ ರವಿ ಚಂದ್ರ ವಿಲೋಚನ
ಜಲರುಹ ಭವನುತ ಚರಣ ಯುಗ
ಬಲಿಭಂಜನ ಗೋವರ್ಧನವಲ್ಲಭ
ನಳಿನೋದರ ತೇ ನಮೋ ನಮೋ

ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನರೂಪ
ವೇದೋದ್ಧಾರ ಶ್ರೀ ವೇಂಕಟನಾಯಕ ಪು-
ರಂದರವಿಠಲ ತೇ ನಮೋ ನಮೋ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನಾರಾಯಣ ಗೋವಿಂದ ಹರಿಹರಿ

ನಾರಾಯಣ ಗೋವಿಂದ ಹರಿಹರಿ
ನಾರಾಯಣ ಗೋವಿಂದ

ನಾರಾಯಣ ಗೋವಿಂದ ಮುಕುಂದ
ಪರತರ ಪರಮಾನಂದ

ಮೊದಲು ಮತ್ಸ್ಯನಾಗಿ ಉದಿಸಿ ಸೋಮನನು
ಸದೆದು ವೇದಗಳ ತಂದ

ಮಂದರಗಿರಿಯಲಿ ಸಿಂಧುಮಥಿಸಿ ಸುಧೆ
ತಂದು ಭಕ್ತರಿಗುಣಲೆಂದ

ಭೂಮಿಯ ಕದಿದಾ ಖಳನನು ಮರ್ದಿಸಿ
ಆ ಮಹಾಸತಿಯಳ ತಂದ

ದುರುಳ ಹಿರಣ್ಯನ ಕರುಳು ಬಗೆದು ತನ್ನ
ಕೊರಳೊಳಗಿಟ್ಟಾನಂದದಿಂದ

ಪುಟ್ಟನಾಗಿ ದಾನಕೊಟ್ಟ ಬಲಿಯ ತಲೆ
ಮೆಟ್ಟಿ ತುಳಿದ ಬಗೆಯಿಂದ

ಧಾತ್ರಿಯೊಳಗೆ ಮುನಿಪುತ್ರನಾಗಿ ಬಂದು
ಕ್ಷತ್ರಿಯರೆಲ್ಲರ ಕೊಂದ

ಮಡದಿಗಾಗಿ ತಾ ಕಡಲನೆ ಕಟ್ಟಿ
ಹಿಡಿದು ರಾವಣನ ಕೊಂದ

ಗೋಕುಲದೊಳು ಹುಟ್ಟಿ ಆಕಳ ಕಾಯ್ದ
ಶ್ರೀಕೃಷ್ಣನು ತಾ ಬಂದ

ಛಲದಲಿ ತ್ರಿಪುರರ ಸತಿಯರ ವ್ರತದ
ಫಲವನಳಿದ ಬಗಿಯಿಂದ

ಧರೆಯೊಳು ಪರಮನೀಚ ಸವರಲು ಕು-
ದುರೆಯನೇರಿದ ಕಲಿ ಚೆಂದ

ದೋಷದೂರ ಶ್ರೀಪುರಂದರವಿಠಲ
ಪೋಷಿಪ ಭಕ್ತರ ವೃಂದ

ನಾಮಕೀರ್ತನೆ ಅನುದಿನ ಮಾಳ್ಪಗೆ ನರಕ ಭಯಗಳುಂಟೆ

ನಾಮಕೀರ್ತನೆ ಅನುದಿನ ಮಾಳ್ಪಗೆ ನರಕ ಭಯಗಳುಂಟೆ

ನಾಮವೊಂದೆ ಯಮನಾಳ್ಗಳನೊದೆದು,
                                      ಅಜಾಮಿಳನಿಗೆ ಸುಕ್ಷೇಮವಿತ್ತ ಹರಿ


ಕೇಸರಿಗಂಜದ ಮೃಗವುಂಟೆ ದಿ-
ನೇಶನಿಗಂಜದ ತಮವುಂಟೆ
ವಾಸುದೇವ ವೈಕುಂಠ ಜಗನ್ಮಯ
ಕೇಶವ ಕೃಷ್ಣಾ ಎಂದುಚ್ಚರಿಸುತ


ಕುಲಿಶಕ್ಕೆದುರಿಹ ಗಿರಿಯುಂಟೆ ಬಲು
ಪ್ರಳಯ ಬಂದಾಗ ಜೀವಿಪರುಂಟೆ
ಜಲಜನಾಭ ಗೋವಿಂದ ಜನಾರ್ದನ
ಕಲುಷಹರಣ ಕರಿರಾಜ ವರದನೆಂದು


ಗರುಡನಿಗಂಜದ ಫಣಿಯುಂಟೆ ದ-
ಳ್ಳುರಿಯಲಿ ಬೇಯದ ತೃಣವುಂಟೆ
ನರಹರಿ ನಾರಾಯಣ ದಾಮೋದರ
ಪುರಂದರವಿಠಲ ಎಂದುಚ್ಚರಿಸುತ

ನಾಚಿಕೆಪಡಬೇಡ ಮನದೊಳು

ನಾಚಿಕೆಪಡಬೇಡ ಮನದೊಳು
ಯೋಚಿಸಿ ಕೆಡಬೇಡ

ನಿಚ್ಚ ನೆನೆಯೊ ನಮ್ಮಚ್ಯುತನಾಮವ
ಮೆಚ್ಚಿ ಕೊಟ್ಟರೆ ಅಚ್ಯುತ ಪದವೀವ

ಹರಿಹರಿಯೆಂದೊದರೋ ಹತ್ತಿದ
ದುರಿತಗಳಿಗೆ ಬೆದರೋ
ವಾರಿಜಾಕ್ಷನ ವೈಕುಂಠಪುರವ
ಸೇರಿ ಸೇರಿ ನೀ ಕುಣಿಕುಣಿದಾಡೊ

ಆರ ಗೊಡವೆ ಏಕೋ ನರಕದ
ದಾರಿ ತಪ್ಪಿಸುವರೇನೋ
ನೀರಜಾಕ್ಷ ನಮ್ಮ ನಿರ್ಜರಪತಿಯಲಿ
ಸೇರಿ ಸೇರಿ ಮನ ನಲಿನಲಿದಾಡೊ

ಭಕ್ತಜನರ ಕೂಡೋ ಭವಭಯ
ಬತ್ತಿಪೋಪುದು ನೋಡೋ
ಮುಕ್ತಿದಾಯಕ ಶ್ರೀಪುರಂದರವಿಠಲನ
ಭಕ್ತಿಯಿಂದ ನೀ ಹಾಡಿ ಕೊಂಡಾಡೊ