ಮಣ್ಣಿಂದ ಕಾಯ ಮಣ್ಣಿಂದ



ಮಣ್ಣಿಂದ ಕಾಯ ಮಣ್ಣಿಂದ



ಮಣ್ಣಿಂದ ಸಕಲ ದೇಶಗಳೆಲ್ಲ
ಮಣ್ಣಿಂದ ಸಕಲ ವಸ್ತುಗಳೆಲ್ಲ
ಮಣ್ಣ ಬಿಟ್ಟವರಿಗೆ ಆಧಾರವಿಲ್ಲ
ಅಣ್ನಗಳಿರೆಲ್ಲರು ಕೇಳಿರಯ್ಯ



ಅನ್ನ ಉದಕ ಊಟವೀಯೋದು ಮಣ್ಣು
ಬಣ್ಣ ಬಂಗಾರ ಬೊಕ್ಕಸವೆಲ್ಲ ಮಣ್ಣು
ಉನ್ನತವಾದ ಪರ್ವತವೆಲ್ಲ ಮಣ್ಣು
ಕಣ್ಣು ಮೂರುಳ್ಳನ ಕೈಲಾಸ ಮಣ್ಣು



ದೇವರ ಗುಡಿ ಮಠ ಮನೆಯೆಲ್ಲ ಮಣ್ಣು
ಆವಾಗ ಆಡುವ್ ಮಡಕೆಯು ತಾ ಮಣ್ಣು
ಕೋವಿದರಸರ ಕೋಟೆಗಳೆಲ್ಲ ಮಣ್ಣು
ಪಾವನ ಗಂಗೆಯ ತಡಿಯೆಲ್ಲ ಮಣ್ಣು



ಭತ್ತಭರಣ ಧಾನ್ಯ ಬೆಳೆಯುವುದೆ ಮಣ್ಣು
ಸತ್ತವರನು ಹೂಳಿಸಿಡುವದೆ ಮಣ್ಣು
ಉತ್ತಮವಾದ ವೈಕುಂಠವೇ ಮಣ್ಣು
ಪುರಂದರವಿಠಲನ್ನ ಪುರವೆಲ್ಲ ಮಣ್ಣು

ಕಂಡೆ ಕರುಣಾನಿಧಿಯ


ಕಂಡೆ ಕರುಣಾನಿಧಿಯ ಗಂಗೆಯ
ಮಂಡೆಯೊಳಿಟ್ಟ ದೊರೆಯ ಶಿವನ

ರುಂಡಮಾಲೆ ಸಿರಿಯನೊಸಲೊಳು
ಕೆಂಡಗಣ್ಣಿನ ಬಗೆಯ ಹರನ

ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ
ಮುಪ್ಪುರ ಗೆಲಿದವನ ಮುನಿಸುತ ಸರ್ಪಭೂಷಣ ಶಿವನ ಹರನ

ಭಸಿತ ಭೂಷಿತ ಶಿವನ ಭಕ್ತರ ವಶದೊಳಗಿರುತಿಹನ
ಪಶುಪತಿಯಿನಿಸುವವ ವಸುಧೆಯೋಳ್ ಶಶಿಶೇಖರ ಶಿವನ ಹರನ

ಗಜ ಚರ್ಮಾಂಬರನ ಗೌರೀವರ ತ್ರಿಜಗದೀಶ್ವರನ
ತ್ರಿಜಗನ್ಮೋಹಕನ ತ್ರಿಲೋಚನ ತಿಪುರಾಂತಕ ಶಿವನ ಹರನ

ಕಾಮಿತ ಫಲವೀವನ ಭಕ್ತರ ಪ್ರೇಮದಿ ಸಲಹುವನ
ರಾಮನಾಮಸ್ಮ್ರರನ ರತಿಪತಿ ಕಾಮನ ಸಂಹರನ ಶಿವನ

ಧರೆಗೆ ದಕ್ಷಿಣಕಾಶಿ ಎನಿಸುವ ಪುರಪಂಪಾವಾಸಿ
ತಾರಕ ಉಪದೇಶಿ ಪುರಂದರವಿಠಲ ಭಕ್ತರ ಪೋಷಿ

ದೇವಕಿ ಕಂದ ಮುಕುಂದ


ದೇವಕಿ ಕಂದ ಮುಕುಂದ

ನಿಗಮೋದ್ಧಾರ ನವನೀತ ಚೋರ
ಖಗಪತಿ ವಾಹನ ಜಗದೋದ್ಧಾರ

ಶಂಖ ಚಕ್ರಧರ ಶ್ರೀ ಗೋವಿಂದ
ಪಂಕಜಲೋಚನ ಪರಮಾನಂದ

ಮಕರಕುಂಡಲಧರ ಮೋಹನವೇಷ
ರುಕುಮಿಣಿ ವಲ್ಲಭ ಪಾಂಡವ ಪೋಷ

ಕಂಸಮರ್ದನ ಕೌಸ್ತುಭಾಭರಣ
ಹಂಸವಾಹನ ಪೂಜಿತ ಚರಣ

ವರ ವೇಲಾಪುರ ಚೆನ್ನ ಪ್ರಸನ್ನ
ಪುರಂದರವಿಠಲ ಸಕಲ ಗುಣಪೂರ್ಣ

ದುರಿತಗಜ ಪಂಚಾನನ


ದುರಿತಗಜ ಪಂಚಾನನ ನರ-
ಹರಿಯೆ ದೇವರ ದೇವ ಕಾಯಬೇಕೆನ್ನ

ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ
ಎತ್ತದೆ ನೆಲಕೆ ಬಿಸಡುವರೆ ಗೋವಿಂದ

ಅರಸು ಮುಟ್ಟಲು ದಾಸಿ ರಂಭೆಯು ದೇವ
ಪರುಷ ಮುಟ್ಟಲು ಲೋಹ ಹೊನ್ನು ಗೋವಿಂದ

ಹೆಸರುಳ್ಲ ನದಿಗಳನೊಳಗೊಂಬ ಜಲಧಿಯು
ಬಿಸುಡುವನೆ ಕಾಲುಹೊಳೆಗಳನು ಗೋವಿಂದ

ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬಂದರೆ
ನಿನ್ನನ್ನು ಮರೆಹೋಗಲೇಕೆ ಗೋವಿಂದ

ಸ್ಮರಣೆಮಾತ್ರಕಜಾಮಿಳಗೆ ಮುಕ್ತಿಯನಿತ್ತೆ
ವರದ ಪುರಂದರವಿಠಲ ಗೋವಿಂದ

ತೂಗಿರೆ ರಂಗನ ತೂಗಿರೆ ಕೃಷ್ಣನ


ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ

ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ
ತೂಗಿರೆ ಕಾವೇರಿ ರಂಗಯ್ಯನ

ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ
ನಾಗಕನ್ನಿಕೆಯರು ತೂಗಿರೆ
ನಾಗವೇಣಿಯರು ನೇಣ ಪಿಡಿದುಕೊಂಡು
ಬೇಗನೆ ತೊಟ್ಟಿಲ ತೂಗಿರೆ

ಇಂದ್ರಲೋಕದಲ್ಲುಪೇಂದ್ರ ಮಲಗ್ಯಾನೆ
ಇಂದುಮುಖಿಯರೆಲ್ಲ ತೂಗಿರೆ
ಇಂದ್ರಕನ್ನಿಕೆಯರು ಚಂದದಿ ಬಂದು ಮು-
ಕುಂದನ ತೊಟ್ಟಿಲ ತೂಗಿರೆ

ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ
ನೀಲಕುಂತಳೆಯರು ತೂಗಿರೆ
ವ್ಯಾಳಶಯನ ಹರಿ ಮಲಗು ಮಲಗುಯೆಂದು
ಬಾಲಕೃಷ್ಣನ ತೂಗಿರೆ

ಸಾಸಿರನಾಮನೆ ಸರ್ವೋತ್ತಮನೆಂದು
ಸೂಸುತ್ತ ತೊಟ್ಟಿಲ ತೂಗಿರೆ
ಲೇಸಾಗಿ ಮಡುವಿನೊಳ್ ಶೇಷನ ತುಳಿದಿಟ್ಟ
ದೋಷವಿದೂರನ ತೂಗಿರೆ

ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ
ತರಳನ ತೊಟ್ಟುಲ ತೂಗಿರೆ
ಸಿರಿದೇವಿ ರಮಣನ ಪುರಂದವಿಠಲನೆ
ಕರುಣದಿ ಮಲಗೆಂದು ತೂಗಿರೆ

ಗಜವದನ ಬೇಡುವೆ ಗೌರೀತನಯ


ಗಜವದನ ಬೇಡುವೆ ಗೌರೀತನಯ
ತ್ರಿಜಗ ವಂದಿತನೆ ಸುಜನರ ಪೊರೆವನೆ

ಪಾಶಾಂಕುಶಧರ ಪರಮಪವಿತ್ರ
ಮೂಷಕವಾಹನ ಮುನಿಜನ ಪ್ರೇಮ

ಮೋದದಿ ನಿನ್ನಯ ಪಾದವ ತೋರೋ
ಸಾಧುವಂದಿತನೆ ಆದರದಿಂದಲಿ

ಸರಸಿಜನಾಭ ಶ್ರೀ ಪುರಂದರವಿಠಲನ
ನಿರುತ ನೆನೆಯುವಂತೆ ದಯಮಾಡೋ

ಗಿಳಿಯು ಪಂಜರದೊಳಿಲ್ಲ ಶ್ರೀರಾಮ ರಾಮ



ಗಿಳಿಯು ಪಂಜರದೊಳಿಲ್ಲ ಶ್ರೀರಾಮ ರಾಮ
ಬರಿದೆ ಪಂಜರವಾಯಿತಲ್ಲ

ಅಕ್ಕ ಕೇಳೆ ಎನ್ನ ಮಾತು
ಚಿಕ್ಕದೊಂದು ಗಿಳಿಯ ಸಾಕಿದೆ
ಅಕ್ಕ ನಾನಿಲ್ಲದ ವೇಳೆ
ಬೆಕ್ಕು ಕೊಂಡು ಹೋಯಿತಯ್ಯೊ

ಅರ್ಥಿಲೊಂದು ಗಿಳಿಯ ಸಾಕಿ
ಮುತ್ತಿನ್ಹಾರವನ್ನು ಹಾಕಿದೆ
ಮುತ್ತಿನ್ಹಾರ ಕೊಂಡು ಗಿಳಿಯು
ಎತ್ತಲ್ಹಾರಿ ಹೋಯಿತಯ್ಯೊ

ಹಸುರು ಬಣ್ನದ ಗಿಳಿಯು
ಕುಶಲ ಬುದ್ದಿಯ್ ಗಿಳಿಯು
ಅಸುವು ಗುಂದಿ ಮರಿಯು ತಾನು
ಹಸನಗೆಡಿಸಿ ಹೋಯಿತಯ್ಯೊ

ರಾಮ ರಾಮ ಎಂಬ ಗಿಳಿ
ಕೋಮಲ ಕಾಯದ ಗಿಳಿ
ಸಾಮಜ ಪೋಷಕ ತನ್ನ
ಪ್ರೇಮದಿ ಸಾಕಿದ ಗಿಳಿ

ಒಂಬತ್ತು ಬಾಗಿಲ ಮನೆಯೋಳ್
ತುಂಬಿದ ಸಂದಣಿ ಇರಲು
ಕಂಭ ಮುರಿದು ಡಿಂಬ ಬಿದ್ದು
ಅಂಬರಕ್ಕೆ ಹಾರಿ ಹೋಯಿತು

ಮುಪ್ಪಾಗದ ಬೆಣ್ಣೆ ತಿಂದು
ತಪ್ಪದೆ ಹಾಕಿದ ಹಾಲ
ಒಪ್ಪದಿಂದ ಕುಡಿದು ಕೈ-
ತಪ್ಪಿ ಹಾರಿಹೋಯಿತಯ್ಯೋ

ಅಂಗೈಲಾಡುವ ಗಿಳಿ
ಮುಂಗೈ ಮೇಲಣ ಗಿಳಿ
ರಂಗ ಪುರಂದರವಿಠಲನ್ನ
ಅಂಗಣದೊಳಾಡುವ ಗಿಳಿ

ಗುಣವಾಯಿತೆನ್ನ ಭವರೋಗ


ಗುಣವಾಯಿತೆನ್ನ ಭವರೋಗ
ಕೃಷ್ಣನೆಂಬ ವೈದ್ಯನು ದೊರಕಿದನು
ಗುಣವಾಗುವವರಿಗೆ ಎಣೆಯಿಲ್ಲ
ಗುಣವಂತರಾಗುವರು ಭವವೆಲ್ಲ

ಸಂತತ ಹರಿಭಕ್ತಿಯನುಪಾನ
ಸಂತತ ಗುರುಭಕ್ತಿ ಮರುಪಾನ
ಸಂತತ ಶ್ರವಣ ಕಠಿಣ ಪಥ್ಯ
ಸಂತತ ಕೀರ್ತನ ಉಷ್ಣೋದಕ

ಚಂದ್ರೋದಯ ಉಂಟು ಈತನಲಿ
ಚಿಂತಾಮಣಿಯುಂಟು ಈತನಲಿ
ಸಂಚಿಯೊಳಗೆ ತುಂಬ ಮಾತ್ರೆಗಳುಂಟು
ಚಿನ್ನಾಗಿ ಗುಣಮಾಡುವನೀತ

ಗುರುಸ್ಮರಣೆಯು ಶುಂಠಿ ಮೆಣಸು
ಹರಿದಿವ್ಯನಾಮವು ಸಾರನ್ನ
ಗುರುಪಾದಸೇವೆಯು ಸಿಹಿ ಸಾರು
ಹರಿಪಾದೋದಕವೇ ಘೃತವು

ಸಹಸ್ರನಾಮದಿ ತಾ ವಂದ್ಯ
ಸಕಲ ಸ್ವತಂತ್ರಕೆ ತಾ ಬಾಧ್ಯ
ಹರಿಸರ್ವೋತ್ತಮನೆಂಬ ವೈದ್ಯ
ಪುರಂದರವಿಠಲನೆ ನಿಜವೈದ್ಯ

ಗುರುರಾಯರ ನಂಬಿರೊ ಮಾರುತಿಯೆಂಬ


ಗುರುರಾಯರ ನಂಬಿರೊ ಮಾರುತಿಯೆಂಬ
ಗುರುರಾಯರ ನಂಬಿರೊ

ಗುರುರಾಯರ ನಂಬಿ ಬಿಡದೆ ಯಾವಾಗಲು
ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ

ವನಧಿಯ ಮನೋವೇಗದಿ ಲಂಘಿಸಿ ಮಹಿ-
ತನುಜೆ ಶೋಕವ ತರಿದು
ವನವ ಬೇರೊಡನೆ ಕಿತ್ತೀಡಾಡಿ ಎದುರಾದ
ದನುಜರ ಸದೆದು ಲಂಕೆಯ ತನ ಸಖಗಿತ್ತ

ಕೌರವ ಬಕ ಹಿಡಿಂಬ ಕೀಚಕರೆಂಬ
ದುರುಳ ಸಂತತಿ ನೆಗ್ಗೊತ್ತಿ
ಘೋರಪಾತಕಿ ದುಶ್ಯಾಸನನ ರಕುತವ
ಹೀರಿ ಮುದದಿ ಮುರವೈರಿಯ ಭಜಿಸಿದ

ಜೀವೇಶರೊಂದೆಂಬುವ ದುರ್ವಾದಿಯ ಅ-
ಭಾವ ಶಾಸ್ತ್ರಗಳೋಡಿಸಿ
ಕೋವಿದರಿಗೆ ಸದ್ಭಾಷ್ಯವ ತೋರಿದ
ದೇವ ಪುರಂದರವಿಠಲ ಸೇವಕರಾದ

ಗೋಪಿಯ ಭಾಗ್ಯವಿದು ಶ್ರೀಪತಿ


ಗೋಪಿಯ ಭಾಗ್ಯವಿದು
ಶ್ರೀಪತಿ ತಾ ಶಿಶುರೋಪಿನಲಿರುವುದು

ಕಡು ಮುದ್ದು ರಂಗನ ತೊಡೆಯಮೇಲೆತ್ತುತ್
ಜಡೆಯ ಹೆಣೆದು ಹೂ ಮುಡಿಸಿ ಬೇಗ
ಬಿಡದೆ ಮುತ್ತಿನ ಚೆಂದರಳೆಲೆಯನು
ಸಡಗರದಿಂದ ಅಲಂಕರಿಸಿದಳು

ನಿತ್ಯನಿರ್ಮಲನಿಗೆ ನೀರನೆರೆದು ತಂ-
ದೆತ್ತಿ ತೊಡೆಯೊಳಿಟ್ಟು ಮೊಲೆಯೂಡಿ
ಮುತ್ತುಕೊಟ್ಟು ಬಲು ವಿಧದಿಂದಾಡಿಸಿ
ಅರ್ಥಿಯಿಂದಲಿ ತಾ ತೂಗಿದಳು

ದೃಷ್ಟಿ ತಾಕೀತೆಂದಿಟ್ಟು ವಿಭೂತಿಯ
ತಟ್ಟೆಯೊಳಾರತಿಗಳ ಬೆಳಗಿ
ಥಟ್ಟನೆ ಉಪ್ಪು ಬೇವು ನಿವಾಳಿಸಿ
ತೊಟ್ಟಿಲೊಳಿಟ್ಟು ತಾ ತೂಗಿದಳು

ಎನ್ನಯ ರನ್ನನೆ ಸುಮ್ಮನಿರೋ ದೊಡ್ಡ
ಗುಮ್ಮನು ಬರುವನು ಅಳಬೇಡ
ಸುಮ್ಮನೆ ಇರು ನಿನಗಮ್ಮಿ ಕೊಡುವೆನೆಂದು
ಬೊಮ್ಮನ ಪಿತನ ತಾ ತೂಗಿದಳು

ಮಾಧವ ಜೋ ಮಧುಸೂದನ ಜೋ ಜೋ
ಯಾದವ ರಾಯ ಶ್ರೀರಂಗನೆ ಜೋ
ಆದಿಮೂರುತಿ ನಮ್ಮ ಪುರಂದರವಿಠಲನ
ಆದರದಿಂದ ತಾ ತೂಗಿದಳು