ಶರಣು ಸಿದ್ದಿ ವಿನಾಯಕ

ಶರಣು ಸಿದ್ದಿ ವಿನಾಯಕ
ಶರಣು ವಿದ್ಯಾ ಪ್ರದಾಯಕ


ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಕವಾಹನ


ನಿಟಿಲನೇತ್ರನ ದೇವಿ ಸುತನೆ
ನಾಗಭೂಷಣ ಪ್ರೀಯನೆ
ಕಟಿಕಟಾಂಗದ ಕೋಮಲಾಂಗನೆ


ಕರ್ಣಕುಂಡಲಧಾರನೆ
ಬಟುವ ಮುತ್ತಿನಹಾರ ಪದಕನೆ
ಬಾಹು ಹಸ್ತ ಚತುಷ್ಟನೇ
ಇಟ್ಟ ತೊಡುಗೆಯು ಹೇಮಕಂಕಣ


ಪಾಶದಂಕುಶಧಾರನೆ
ಕೂಕ್ಷಿ ಮಹಾಲಂಬೋದರನೆ
ಇಕ್ಷುಚಾಪನ ಗೆಲಿದನೆ
ಪಕ್ಷಿವಾಹನನಾದ ಪುರಂದರವಿಠಲನ ನಿಜದಾಸನೆ

ಭಾಗ್ಯದ ಲಕ್ಷ್ಮಿ ಬಾರಮ್ಮ

ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮಾ ಶ್ರೀ
ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ

ಗೆಜ್ಜೆ ಕಾಲ್‌ಗಳ ಧ್ವನಿಯ ತೋರುತ
ಹೆಜ್ಜೆಯ ಮೇಲೆ ಹೆಜ್ಜೆಯ ನಿಕ್ಕುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಕನಕ ವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ತೊರೆ
ದಿನಕರ ಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ

ಶಂಕೆ ಇಲ್ಲದ ಭಾಗ್ಯವ ಕೊಡಲು
ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜ ಲೋಚನೆ
ವೆಂಕಟರಮಣನ ಬಿಂಕದ ರಾಣಿ

ಅತ್ತಿತ್ತಗಲದೆ ಭಕ್ತರ ಮನೆಯೊಳು
ನಿತ್ಯ ಮಹೋತ್ಸವ ನಿತ್ಯ ಸುಮಂಗಲ
ಸತ್ಯದಿ ತೋರುತ ಸಾಧು ಸಜ್ಜನರಾ
ಚಿತ್ತದಿ ಹೊಳೆಯುವ ಪುತ್ತಳಿ ಗೊಂಬೆ

ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಆಳಗಿರಿ ರಂಗನ
ಚೊಕ್ಕ ಪುರಂದರವಿಠಲನ ರಾಣಿ

ಅನುಭವದಡುಗೆಯ ಮಾಡಿ

ಅನುಭವದಡುಗೆಯ ಮಾಡಿ ಅದ-
ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ


ತನುವೆಂಬ ಬಾಂಢವ ತೊಳೆದು ಕೆಟ್ಟ
ಮನದ ಚಂಚಲವೆಂಬ ಮುಸುರೆಯ ಕಳೆದು
ಘನವಾಗಿ ಮನೆಯನ್ನು ಬಳಿದು ಅಲ್ಲಿ
ಮಿನುಗುವ ತ್ರಿಗುಣದ ಒಲೆಗುಂಡುನೆಡೆದು


ವಿರಕ್ತಿಯೆಂಬುವ ಮಡಿಯುಟ್ಟು ಪೂರ್ಣ
ಹರಿಭಕ್ತಿಯೆಂಬ ನೀರನ್ನೆಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು ಮಾಯಾ
ಮರೆವೆಂಬ ಕಾಷ್ಠವ ಮುದದಿಂದ ಸುಟ್ಟು


ಶರಣೆಂಬೊ ಸಾಮಗ್ರಿ ಹೂಡಿ ಮೋಕ್ಷ
ಪರಿಕರವಾದಂಥ ಪಾಕವ ಮಾಡಿ
ಗುರು ಶರಣರು ಸವಿದಾಡಿ ನಮ್ಮ ಪುರಂ-
ದರವಿಠಲನ ಬಿಡದೆ ಕೊಂಡಡಿ

ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ

ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ

ಕದ ಬಾಗಿಲಿರಿಸಿಹ ಕಳ್ಳ ಮನೆ ಇದು
ಮುದಿದಿಂದಲೋಲ್ಯಾಡೊ ಸುಳ್ಳು ಮನೆ
ಇದಿರಾಗಿ ವೈಕುಂಠ ವಾಸ ಮಾಡುವಂಥ
ಪದುಮನಾಭನ ದಿವ್ಯ ಬದುಕು ಮನೆ


ಮಾಳಿಗೆ ಮನೆಯೆಂದು ನೆಚ್ಚಿ ಕೆಡಲುಬೇಡ
ಕೇಳಯ್ಯ ಹರಿಕಥೆ ಶ್ರವಣಂಗಳ
ನಾಳೆ ಯಮದೂತರು ಬಂದೆಳೆದೊಯ್ದಾಗ
ಮಾಳಿಗೆ ಮನೆ ಸಂಗಡ ಬಾರದಯ್ಯ


ಮಡದಿ ಮಕ್ಕಳೆಂಬ ಹಂಬಲ ನಿನಗೇಕೊ
ಕಡು ಗೊಬ್ಬುತನದಲಿ ನಡೆಯದಿರು
ಒಡೆಯ ಶ್ರೀ ಪುರಂದರವಿಠಲನ ಚರಣವ
ದೃಢ ಭಕ್ತಿಯಲಿ ನೀ ಭಜಿಸಿಕೊ ಮನುಜ

ಆದದ್ದೆಲ್ಲ ಒಳಿತೇ ಆಯಿತು

ಆದದ್ದೆಲ್ಲ ಒಳಿತೇ ಆಯಿತು ನಮ್ಮ

ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು

ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮಂಡೆ ಬಾಗಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ


ಗೋಪಾಳ ಬುಟ್ಟಿ ಹಿಡಿಯುವುದಕ್ಕೆ
ಭೂಪತಿಯೆಂದು ಗರ್ವಿಸುತ್ತಿದ್ದೆ
ಆ ಪತ್ನೀಕುಲ ಸಾವಿರವಾಗಲಿ
ಗೋಪಾಳ ಬುಟ್ಟಿ ಹಿಡಿಸಿದಳಯ್ಯ


ತುಳಸೀ ಮಾಲೆ ಹಾಕುವುದಕ್ಕೆ
ಅರಸನೆಂದು ತಿರುಗುತಲಿದ್ದೆ
ಸರಸಿಜಾಕ್ಷ ಪುರಂದರವಿಠಲನು
ತುಳಸೀಮಾಲೆ ಹಾಕಿಸಿದನು

ಆರು ಹಿತವರು ನಿನಗೆ ಮೂರು ಮಂದಿಯೊಳಗೆ

ಆರು ಹಿತವರು ನಿನಗೆ ಮೂರು ಮಂದಿಯೊಳಗೆ

ನಾರಿಯೋ ಧಾರುಣಿಯೋ ಬಲು ಧನದ ಸಿರಿಯೋ

ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು
ತನ್ನ ಮನೆಗವಳ ಯಜಮಾನಿ ಎನಿಸಿ
ಬಿನ್ನವಿಲ್ಲದೆ ಅರ್ಧದೇಹವೆನಿಸಿಸುವ ಸತಿಯು
ಕಣ್ಣಿನಲಿ ನೋಡಲಮ್ಮಳು ಕಾಲವಶದಿ

ಮುನ್ನ ಶತಕೋಟಿ ರಾಯರುಗಳಾಳಿದ ನೆಲನ
ತನ್ನದೆಂದೆನುತ ಶಾಸನವ ಬರೆಸಿ
ಬಿನ್ನಣದ ಮನೆಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನು ಅಸುವಳಿಯೆ ಹೊರಗೆ ಹಾಕುವರು

ಉದ್ಯೋಗ ವ್ಯವಹಾರ ನೃಪಸೇವೆ ಕುಶಲಗತಿ
ಕ್ಷುದ್ರತನ ಕಳವು ಪರದ್ರೋಹದಿಂದ
ಬುದ್ಧಿಯಿಂದಲಿ ಗಳಿಸಿ ಇಟ್ಟಿದ್ದ ಅರ್ಥವನು
ಸದ್ಯದಲಿ ಆರುಂಬುವರು ಪೇಳೊ ಮನುಜ

ಶೋಕವನು ಗೈಯುವರು ಸತಿಸುತರು ಬಾಂಧವರು
ಜೋಕೆ ತಪ್ಪಿದ ಬಳಿಕ ಅರ್ಥ ವ್ಯರ್ಥ
ಲೋಕದೊಳು ಗಳಿಸಿರ್ದ ಪುಣ್ಯಪಾಪಗಳೆರಡು
ಸಾಕಾರವಾಗಿ ಸಂಗಡ ಬಾಹೊವಲ್ಲದೆ

ಅಸ್ಥಿರದ ದೇಹವನು ನೆಚ್ಚಿ ನೀ ಕೆಡಬೇಡ
ಸ್ವಸ್ಥದಲಿ ನೆನೆ ಕಂಡ್ಯ ಪರಮಾತ್ಮನ
ಚಿತ್ತದೊಳು ಶುದ್ಧಿಯಿಂ ಪುರಂದರವಿಠಲನೆ
ಉತ್ತಮೋತ್ತಮನೆಂದು ಸುಖಿಯಾಗೊ ಮನುಜ

ಇನ್ನೂ ದಯೆ ಬಾರದೆ ದಾಸನ ಮೇಲೆ


ಇನ್ನೂ ದಯೆ ಬಾರದೆ ದಾಸನ ಮೇಲೆ

ಪನ್ನಂಗಶಯನ ಪಾಲ್ಗಡಲೊಡೆಯನೆ ರಂಗ

ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ
ನಾನ್ನ ಯೋನಿಗಳಲ್ಲಿ ಅಳಿದು ಪುಟ್ಟಿ
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೇ ಗತಿಯೆಂದು ನಂಬಿದ ದಾಸನ ಮೇಲೆ


ಕಾಮಾದಿ ಷಡ್ವರ್ಗ ಗಾಢಾಂಧಕಾರದಿ
ಪಾಮರನಾಗಿದ್ದ ಪಾತಕನು
ಶ್ರೀಮನೋಹರನೆ ಚಿತ್ತಜ ಜನಕನೆ
ನಾಮಮುದ್ರಿಕೆಯಿಂದ ನಂಬಿದ ದಾಸನ ಮೇಲೆ


ಮಾನಸ-ವಾಚ-ಕಾಯದಿ ಮಾಳ್ಪ ಕರ್ಮವು
ದಾನವಾಂತಕ ನಿನ್ನಾಧೀನವಲ್ಲವೆ
ಏನು ಮಾಡಿದರೇನು ಪ್ರಾಣ ನಿನ್ನದು ದೇವ
ಶ್ರೀನಾಥ ಪುರಂದರವಿಠಲ ದಾಸನ ಮೇಲೆ

ಈ ಪರಿಯ ಸೊಬಗಾವ ದೇವರಲಿ ಕಾಣಿ

ಈ ಪರಿಯ ಸೊಬಗಾವ ದೇವರಲಿ ಕಾಣಿ
ಗೋಪೀಜನಪ್ರಿಯ ಗೋಪಾಲಗಲ್ಲದೆ


ಧೊರೆಯತನದಲಿ ನೋಡೆ ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೆ ಶ್ರೀಕಾಂತನು
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜನದಾದಿ ಗುರುವು


ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತ್ವದಲಿ ನೋಡೆ ದಿವಿಜರೊಡೆಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಆವ ದೈರ್ಯದಿ ನೋಡೆ ಅಸುರಾಂತಕ


ಗಗನದಲಿ ಸಂಚರಿಪ ಗರುಡ ತುರಗ
ಜಗತೀಧರ ಶೇಷ ಪರಿಯಂಕ ಶಯನ
ನಿಗಮಗೋಚರ ಪುರಂದರವಿಠಲಗಲ್ಲದೆ
ಮಿಗಿಲಾದ ದೈವಗಳಿಗೀ ಭಾಗ್ಯವುಂಟೆ

ದೇವ ಬಂದ ನಮ್ಮ ಸ್ವಾಮಿ ಬಂದನೊ

ದೇವ ಬಂದ ನಮ್ಮ ಸ್ವಾಮಿ ಬಂದನೊ
ದೇವರ ದೇವ ಶಿಖಾಮಣಿ ಬಂದನೊ


ಉರಗಶಯನ ಬಂದ ಗರುಡಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ


ಮಂದರೋದ್ದರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೊ


ನಕ್ರಹರನು ಬಂದ ಚಕ್ರಧರನು ಬಂದ
ಅಕ್ರೂರಗೊಲಿದ ತ್ರಿವಿಕ್ರಮ ಬಂದನೊ


ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ
ಅಕ್ಷಯ ಫಲದ ಶ್ರೀ ಲಕ್ಷ್ಮೀರಮಣ ಬಂದನೊ


ನಿಗಮಗೋಚರ ಬಂದ ನಿತ್ಯತೃಪ್ತನು ಬಂದ
ನಗೆಮುಖ ಪುರಂದರವಿಠಲ ಬಂದನೊ

ಪಿಳ್ಳಂಗೋವಿಯ ಚೆಲ್ವ ಕೃಷ್ಣನ

ಪಿಳ್ಳಂಗೋವಿಯ ಚೆಲ್ವ ಕೃಷ್ಣನ
ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ


ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರು

ನಂದಗೋಪನ ಮಂದಿರಂಗಳ ಸಂದುಗೊಂದಿನಲಿ
ಚೆಂದ ಚೆಂದದ ಗೋಪಬಾಲರ ವೃಂದವೃಂದದಲಿ
ಸುಂದಾರಾಂಗದೆ ಸುಂದರಿಯರ ಹಿಂದುಮುಂದಿನಲಿ
ಅಂದದಾಕಳ ಕಂದಕರುಗಳ ಮಂದೆ ಮಂದೆಯಲಿ

ಶ್ರೀಗುರೂಕ್ತ ಸದಾ ಸುಮಂಗಳ ಯೋಗ ಯೋಗದಲಿ
ಆಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ
ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ
ಭಾಗವತರು ಸದಾ ಬಾಗಿ ಪಾಡುವ ರಾಗ ರಾಗದಲಿ

ಈ ಚರಾಚರದೊಳಗೆ ಜನಂಗಳಾಚೆ ಈಚೆಯಲಿ
ಖೇಚರೇಂದ್ರನ ಸುತನ ರಥದ ಚೌಕ ಪೀಠದಲಿ
ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ
ವೀಚುಕೊಡದ ಪುರಂದರವಿಠಲನ ಲೋಚನಾಗ್ರಹದಲಿ

ಬಂದದ್ದೆಲ್ಲ ಬರಲಿ ಗೋವಿಂದನ ದಯ ನಮಗಿರಲಿ

ಬಂದದ್ದೆಲ್ಲ ಬರಲಿ ಗೋವಿಂದನ ದಯ ನಮಗಿರಲಿ


ಇಂದಿರೆ ರಮಣನ ಧ್ಯಾನವ ಮಾಡಲು
ಬಂದ ದುರಿತ ಬಯಲಾದುದಿಲ್ಲವೆ


ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು
ದುರುಳ ಕೌರವ ಬಂದು ಅತಿ ಹರುಷದಲಿರುತಿರಲಂದು
ಹರಿ ಕೃಪೆ ಅವರಲ್ಲಿದ್ದ ಕಾರಣ ಬಂದ
ಘೋರ ದುರಿತ ಬಯಲಾದುದಿಲ್ಲವೆ?


ಆರು ಒಲಿಯದಿರಲೆನ್ನ ಮುರಾರಿ ಎನಗೆ ಪ್ರಸನ್ನ
ಹೋರುವ ದುರಿತದ ಬನ್ನ ನಿವಾರಿಪ ಕರುಣ ಸಂಪನ್ನ
ಶ್ರೀರಮಣನ ಸಿರಿ ಚರಣ ಶರಣರಿಗೆ
ಕ್ರೂರ ಯಮನು ಶರಣಾಗಲಿಲ್ಲವೆ?


ಸಿಂಗನ ಪೆಗಲೇರಿದವಗೆ ಕರಿ ಭಂಗವೇಕೆ ಮತ್ತವಗೆ
ರಂಗನ ಕೃಪೆಯುಳ್ಳವಗೆ ಭವ ಭಂಗಗಳೇತಕ್ಕವಗೆ
ಮಂಗಳ ಮಹಿಮ ಪುರಂದರವಿಠಲ ಶು-
ಭಾಂಗನ ದಯವೊಂದಿದ್ದರೆ ಸಾಲದೆ

ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ


ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ

ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ

ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನ ಸಜ್ಜಿಗೆ ತೆಗೆದು ಸಣ್ಣ ಸೇವೆಗೆ ಹೊಸೆದು

ಹೃದಯವೆಂಬೊ ಪಾತ್ರೆಯೊಳಗೆ ಭಾವವೆಂಬೊ ಎಸರು ಇಟ್ಟು
ಬುದ್ದಿಯಿಂದ ಪಕ್ವವ ಮಾಡಿ ಹರಿವಾಣದೊಳಗೆ ನೀಡಿ

ಆನಂದ ಆನಂದವೆಂಬೊ ತೇಗು ಬಂದ ಪರಿಯಲಿ
ಆನಂದಮೂರುತಿ ನಮ್ಮ ಪುರಂದರವಿಠಲ ನೆನೆಯಿರೊ